ಮಡಿಕೇರಿ, ಮಾ. 21 : ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿದು, ಹಾರಂಗಿ ಜಲಾಶಯ ಸೇರುವ ನದಿಗಳಲ್ಲಿ ಸಾಕಷ್ಟು ಹೂಳು ತುಂಬಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದಲ್ಲಿ ಇದುವರೆವಿಗೂ ಈ ನದಿಗಳಲ್ಲಿ ತುಂಬಿರುವ ಹೂಳನ್ನು ತೆಗೆಯದೆ ಇರಲು ಕಾರಣಗಳೇನು, ಯಾವ ಕಾಲಮಿತಿಯೊಳಗೆ ಸದರಿ ನದಿಗಳಲ್ಲಿನ ಹೂಳನ್ನು ತೆಗೆಯುವ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸದಸ್ಯೆ ವೀಣಾ ಅಚ್ಚಯ ಅವರು ಮಾನ್ಯ ಜಲಸಂಪನ್ಮೂಲ ಸಚಿವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರಾದ ರಮೇಶ್ ಲ. ಜಾರಕಿಹೊಳಿ ಅವರು, ಹಾರಂಗಿ ಜಲಾನಯನ ಪ್ರದೇಶ ಹಾಗೂ ನದಿ ಪಾತ್ರದಲ್ಲಿ ತೀವ್ರತರವಾಗಿ ಹಾನಿಗೊಳಗಾದ ಹಲವಾರು ಪ್ರದೇಶಗಳನ್ನು ತಂತ್ರಜ್ಞರು ಪರಿಶೀಲಿಸಿ, ವಿನ್ಯಾಸಗಳಿಗೆ ಅನುಗುಣವಾಗಿ ರೂ.130 ಕೋಟಿಗಳ ಅಂದಾಜು ಪಟ್ಟಿಯನ್ನು ಕಾವೇರಿ ನೀರಾವರಿ ನಿಗಮದಿಂದ ತಯಾರಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿಗಮದ ಕಾರ್ಯಕ್ರಮದ ಕಾರ್ಯಭಾರ ಅಧಿಕವಾಗಿರುವುದರಿಂದ ಈ ಕಾಮಗಾರಿಗಳನ್ನು 2020-21 ನೇ ಸಾಲಿನಲ್ಲಿ ಆದ್ಯತೆಯ ಮೇಲೆ ಅಗತ್ಯ ಅನುದಾನದೊಂದಿಗೆ ಕೈಗೊಳ್ಳಲು ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.