ಮಡಿಕೇರಿ, ಫೆ. 29: ಇತ್ತೀಚೆಗೆ ರಾಜಾಸೀಟಿನಲ್ಲಿ ಏರ್ಪಡಿಸಲಾಗಿದ್ದ ಫಲಪುಷ್ಪ ಪ್ರದರ್ಶನ ಖರ್ಚು ವೆಚ್ಚ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ಪಡೆದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಿತಿ ಸಭೆಯಲ್ಲಿ ಮಾಹಿತಿ ಪಡೆದರು. ರಾಜಾಸೀಟಿನಲ್ಲಿ ಏರ್ಪಡಿಸಲಾಗಿದ್ದ ಫಲಪುಷ್ಪ ಪ್ರದರ್ಶನ ಸಂಬಂಧ ಒಂದು ಅಥವಾ ಎರಡು ವಾರದೊಳಗೆ ಬಿಲ್ಲುಗಳನ್ನು ಪಾವತಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಧರ್ ಅವರು ಫಲಪುಷ್ಪ ಪ್ರದರ್ಶನ ಸಂದರ್ಭದಲ್ಲಿ ಸುಮಾರು 34,699 ಮಂದಿ ಭೇಟಿ ನೀಡಿದ್ದು, 3,46,990 ರೂ. ಸಂಗ್ರಹವಾಗಿದೆ. ಸುಮಾರು 1,338 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಗಾಂಧಿ ಮೈದಾನದಲ್ಲಿ ತೆರೆಯಲಾಗಿದ್ದ 41 ಮಳಿಗೆಯಲ್ಲಿ 4,000 ದಂತೆ 1,64,000 ರೂ. ಆದಾಯ ಬಂದಿದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಅವರು ರಾತ್ರಿ ಏಳೂವರೆಗೆ ಪ್ರವಾಸಿಗರಿಗೆ ರಾಜಾಸೀಟು ಪ್ರವೇಶ ಕೊನೆಗೊಳ್ಳಲಿದೆ. ಈ ವೇಳೆಯನ್ನು ಹೆಚ್ಚಿಸಬೇಕೆಂಬುದು ಸಾರ್ವಜನಿಕರಿಂದ ಒತ್ತಾಯ ಕೇಳಿ ಬರುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್, ಪೌರಾಯುಕ್ತ ಎಂ.ಎಲ್. ರಮೇಶ್, ಪೊಲೀಸ್ ಇಲಾಖೆಯ ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ಪದ್ಮನಾಭ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ, ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಗಿರೀಶ್ ಇತರರು ಇದ್ದರು.