ಮಡಿಕೇರಿ, ಫೆ. 14: ಸುಂಟಿಕೊಪ್ಪದ ವಿಕಾಸ ಜನಸೇವಾ ಟ್ರಸ್ಟ್‍ನ ಅನಾಥಶ್ರಮದಲ್ಲಿ ಮಿತ್ತೂರು ದರ್ಶನ್ ರಾಘವಯ್ಯನವರ ಧ್ವನಿ ಸಿನಿ ಕ್ರಿಯೆಷನ್ ಪ್ರೊಡಕ್ಷನ್ ಅವರಿಂದ ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ ಎಂಬ ಕನ್ನಡ ಚಿತ್ರದ ಚಿತ್ರೀಕರಣ ನಡೆಯಿತು. ಅನಾಥ ಮಕ್ಕಳ ಜೀವನದ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರಿನ ಸುನೀಲ್ ನಿರ್ದೇಶನ ಮಾಡುತ್ತಿದ್ದು, ಸುಮಂತ್ ಕ್ಯಾಮರಾಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಕುಮುಖ ಚಲನಚಿತ್ರದ ನಾಯಕ ನಟ ಹಾಗೂ ನಿರ್ಮಾಪಕ ಕೊಡಗಿನ ಸಿದ್ದಾಪುರದ ಮಿತ್ತೂರು ದರ್ಶನ್ ರಾಘವಯ್ಯ ಚಿತ್ರ ನಿರ್ಮಿಸುತ್ತಿದ್ದು, ನಾಯಕನಾಗಿ ನಟಿಸುತ್ತಿದ್ದಾರೆ. ಕೊಡಗಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ಸಾಗುತ್ತಿದೆ. ಚಿತ್ರದಲ್ಲಿ ಬಾಲನಟನಾಗಿ ಕೆಂಬಡತಂಡ ಚಿರಂತ್ ಪೂಣಚ್ಚ, ಬಾಲನಟಿಯಾಗಿ ಮೂರ್ನಾಡುವಿನ ಈರಮಂಡ ಕುಶಿ ಕಾವೇರಮ್ಮ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ತಂಡ ವಿಕಾಸ್ ಜನಸೇವಾ ಟ್ರಸ್ಟ್‍ನ ಅನಾಥಶ್ರಮದಲ್ಲಿ ನೊಂದ ಜೀವಗಳೊಂದಿಗೆ ಬೆರೆತು ಅವರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಒದಗಿಸಿದೆ.