ಪ್ರತಿಯೊಂದು ಸ್ಮಾರಕಗಳ ಹಿಂದೆಯೂ ಹಲವಾರು ಕತೆಗಳಿರುತ್ತವೆ. ಸ್ಮಾರಕಗಳ ಸೌಂದರ್ಯದಷ್ಟೇ, ಅವುಗಳ ಇತಿಹಾಸವೂ ಜನರನ್ನು ಸೆಳೆಯುತ್ತದೆ. ಐತಿಹಾಸಿಕ ಸ್ಮಾರಕಗಳು ಚರಿತ್ರೆಯನ್ನು ಅರಿಯುವ ದಾರಿದೀಪಗಳಾಗಿದ್ದು, ಇಂಥ ಸ್ಮಾರಕಗಳನ್ನು ಉಳಿಸಿ ಬೆಳೆಸಿ, ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಮಡಿಕೇರಿ ನಗರದ ಹೃದಯ ಭಾಗದಂತಿರುವ ಐತಿಹಾಸಿಕ ರಾಜಾಸೀಟ್ ಬಳಿ ಇತಿಹಾಸದ ಕುರುಹುಗಳನ್ನು ಬಿಟ್ಟುಹೋಗಿರುವ ಸ್ಮಾರಕವೊಂದು ಕಾಡಿನೊಳಗೆ ಇನ್ನೂ ಬಿಸಿಲು, ಮಳೆ, ಗಾಳಿಗೂ ಜಗ್ಗದೆ ಸುಸ್ಥಿತಿಯಲ್ಲಿ ಭದ್ರವಾಗಿ ನೆಲೆ ನಿಂತಿದೆ. ಆದರೆ ಸುತ್ತಲೂ ಕಾಡು ಆವರಿಸಿಕೊಂಡು ಅತಿಕ್ರಮಣಕಾರರಿಂದ ತನ್ನನ್ನು ತಾನೇ ಇಲ್ಲಿಯವರೆಗೆ ಸಂರಕ್ಷಿಸಿಕೊಂಡಿದೆ.
ಇಲ್ಲಿ ನಿಂತಿರುವ ಸರಿ ಸುಮಾರು 90 ವರ್ಷಗಳ ಇತಿಹಾಸವಿರುವ ಸ್ಮಾರಕಕ್ಕೂ ಒಂದು ಹಿನ್ನೆಲೆ ಇದೆ. 1929 ನವೆಂಬರ್ 29 ರಂದು ಈ ಸ್ಮಾರಕ ನೆಲೆ ನಿಂತಿರುವ ಜಾಗದಲ್ಲಿ, ಸ್ವತಂತ್ರ ಪೂರ್ವ ಭಾರತದ ವೈಸ್ರಾಯ್ ಲಾರ್ಡ್ ಇರ್ವಿನ್ನನ್ನು ಕೊಡಗಿಗೆ ಭೇಟಿ ನೀಡಿದ ಸಂದರ್ಭ ಕೊಡಗಿನ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ ಸ್ಥಳವಾಗಿದೆ. ಇರ್ವಿನ್ ಸ್ಮಾರಕವು ರಾಜಾಸೀಟ್ ಮತ್ತು ಗಾಂಧಿ ಮೈದಾನದ ನಡುವಿನಲ್ಲಿರುವ ಗುಡ್ಡದ ಮೇಲಿದೆ. ಈ ಸ್ಮಾರಕವು ಇಲ್ಲಿರುವ ಬಗ್ಗೆ ಬಹುಪಾಲು ಸ್ಥಳೀಯರಿಗೆ ಮಾಹಿತಿ ಇರಲಿಕ್ಕಿಲ್ಲ. ಈ ಸ್ಮಾರಕವು ಕಾಡು ಪಾಲಾಗಿ 30 ವರ್ಷಗಳು ಕಳೆದಿರಬಹುದು. ಹಾಗಾಗಿ ಇಂದಿನ ಪೀಳಿಗೆಯವರಿಗೆ ಇರ್ವಿನ್ ಸ್ಮಾರಕದ ಬಗ್ಗೆ ಎಳ್ಳಷ್ಟೂ ಗೊತ್ತೆ ಇಲ್ಲ.
ಈ ಸ್ಮಾರಕದ ಬಗ್ಗೆ ಮಾಹಿತಿಗಾಗಿ ಕೊಡಗಿನ ಇತಿಹಾಸವನ್ನು ತಿಳಿಸುವ ಪರಿಷ್ಕøತಗೊಂಡಿರುವ “ಕೊಡಗು ಗೆಜೆಟಿಯರ್” ಹಾಗೂ “ಕೊಡಗಿನ ಇತಿಹಾಸ” ಪುಸ್ತಕವನ್ನು ತಿರುವಿ ಹಾಕಿದಾಗ ಲಾರ್ಡ್ ಇರ್ವಿನ್ನನು ಕೊಡಗಿಗೆ ಭೇಟಿ ನೀಡಿದ ಸಂದರ್ಭ ಕೊಡಗಿನ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ ನೆನಪಿಗೆ ಒಂದು ಸ್ಮಾರಕವಿತ್ತು. ಅದು ಈಗ ಇಲ್ಲವಾಗಿದೆ ಎಂದು ಮಾತ್ರ ಉಲ್ಲೇಖವಿದೆ. ಒಂದೊಂದು ಪ್ರಾಚೀನ ಸ್ಮಾರಕದ ಹಿಂದೆ ಒಂದೊಂದು ಕತೆ ಇರುವುದರಿಂದ ಮುಂದಿನ ಪೀಳಿಗೆಯ ಅರಿವು ವಿಸ್ತರಣೆಗೆ ನಾವು ಸಂರಕ್ಷಿಸಬೇಕಿದೆ. ಐತಿಹಾಸಿಕ ಸ್ಮಾರಕ, ಅವಶೇಷಗಳನ್ನು ಸಂರಕ್ಷಿಸುವವರು ಇತಿಹಾಸವನ್ನು ಪ್ರೀತಿಸುತ್ತಾರೆ ಎಂಬ ಒಂದು ಮಾತು ರೂಢಿಯಲ್ಲಿದೆ.
ಸ್ಮಾರಕದ ಕಲ್ಪನೆಯೇ ರೋಚಕವಾದದ್ದು. ಏಕಕಾಲಕ್ಕೆ ವ್ಯಕ್ತಿತ್ವದ ಮಹಿಮೆ ಸಾರುತ್ತಲೇ ಸ್ಥಳ ಸೊಬಗನ್ನು ಹೆಚ್ಚಿಸುವ ಒಂದು ಸುಂದರ ಕಲ್ಪನೆಯೇ ಸ್ಮಾರಕ. ಒಂದೊಂದು ಸ್ಮಾರಕವು ವ್ಯಕ್ತಿಯ ಅಥವಾ ಸ್ಥಳಗಳ ಪ್ರಮುಖ ಘಟನೆಗಳನ್ನು ನೆನಪಿಸುವ, ಆಯಾ ಘಟನೆಗಳನ್ನು ಮತ್ತು ವಸ್ತುಗಳನ್ನು ಪ್ರಚುರಪಡಿಸುವ ರಚನಾತ್ಮಕ ವಿನ್ಯಾಸಗಳಾಗಿವೆ. ಆಯಾ ವ್ಯಕ್ತಿಗಳ ಬದುಕನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಒಂದು ಪ್ರಯತ್ನವೇ ಸ್ಮಾರಕ.
ಹೀಗಿದ್ದವರೊಬ್ಬರು ಬದುಕಿದ್ದರು ಎಂಬ ಚಿತ್ರಣವನ್ನು ನಮ್ಮ ಮುಂದಿನ ತಲೆಮಾರಿಗೆ ಕಟ್ಟಿಕೊಡುವ ಜವಾಬ್ದಾರಿ ನಮ್ಮದಾಗಬೇಕು. ಇತಿಹಾಸದಲ್ಲಿ ತಮ್ಮ ಛಾಪನ್ನು ಬಿಟ್ಟು ಹೋದ ವ್ಯಕ್ತಿಗಳು ತಮ್ಮ ಕಾಲವಾದ ನಂತರವೂ ಸ್ಮಾರಕದ ಮೂಲಕ ಹೊಸ ತಲೆಮಾರುಗಳಿಗೆ ಮುಖಾಮುಖಿ ಆಗುತ್ತಲೇ ಇದ್ದಾರೆ.
ಹೆಚ್ಚುತ್ತಿರುವ ನಗರೀಕರಣ ಪ್ರಕ್ರಿಯೆಯಿಂದಾಗಿ ಈ ಸ್ಮಾರಕಗಳು ಹಾನಿಗೊಳಗಾಗುತ್ತಿವೆ. ಹೀಗಾಗಿ ಇವುಗಳ ಸಂರಕ್ಷಣೆಗೆ ಗಂಭೀರವಾಗಿ ಚಿಂತಿಸಬೇಕು. ಐತಿಹಾಸಿಕ ಸ್ಮಾರಕಗಳು, ಶಿಲ್ಪಕಲಾಕೃತಿಗಳು ದೇಶದ ಅಮೂಲ್ಯ ಆಸ್ತಿಗಳಾಗಿವೆ. ಅವುಗಳನ್ನು ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಸ್ಮಾರಕಗಳು ಕೇವಲ ಪ್ರವಾಸಿ ತಾಣವಾಗಿ ಉಳಿಯದೇ, ಸಂಶೋಧನೆ ಬಯಸಿ ಬರುವವರಿಗೆ ಆಕರಗಳಾಗಿ, ತಂತ್ರಜ್ಞರಿಗೆ ಗೈಡ್ ಆಗಿ, ಸಿನಿಮಾ ಚಟುವಟಿಕೆಗಳಿಗೆ ಶೂಟಿಂಗ್ ತಾಣವಾಗಿಯೂ ಅವುಗಳು ರೂಪುಗೊಂಡಿವೆ.
ಸ್ಮಾರಕಗಳನ್ನು ಮೂಲ ಸ್ವರೂಪದಲ್ಲಿ ಸಂರಕ್ಷಿಸಿ ಸಮಸ್ಥಿತಿಗೆ ಕೊಂಡೊಯ್ಯಬೇಕಾದ ಅಗತ್ಯತೆ ಇರುವುದರಿಂದ ಪುರಾತತ್ವ ಇಲಾಖೆ ಅಸ್ತಿತ್ವಕ್ಕೆ ಬಂದಿದೆ. ಕಣ್ಣೆದುರಿನಲ್ಲಿಯೇ ಅನೇಕ ಸ್ಮಾರಕಗಳು ನಾಶವಾಗುತ್ತಿದ್ದರೂ ಸಾರ್ವಜನಿಕರಲ್ಲಿ ಜಾಗೃತಿಯಾಗುತ್ತಿಲ್ಲ. ಹಾಗಾಗಿ ಸ್ಮಾರಕ, ಅವಶೇಷಗಳ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕಿದೆ. 1940ರ ನಂತರ ಸ್ಮಾರಕಗಳ ಸಂರಕ್ಷಣಾ ಕಾರ್ಯ ಮಹತ್ವ ಪಡೆದುಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಇದು ಕ್ಷೀಣಿಸುತ್ತಿದೆ. ಮತ್ತೆ ಸ್ಮಾರಕಗಳ ಸಂರಕ್ಷಣೆಗೆ ಜೀವತುಂಬಿ ಇತಿಹಾಸದ ಕುರುಹುಗಳನ್ನು ಉಳಿಸುವ ಮಹತ್ಕಾರ್ಯವಾಗಬೇಕಿದೆ.
- ಅರುಣ್ ಕೂರ್ಗ್, ಮಡಿಕೇರಿ