ದುಬೈ, ಡಿ. 18: ಕೊಂಡಂಗೇರಿಯ ಸದಸ್ಯರುಗಳ ಒಕ್ಕೂಟವಾದ ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಯುಎಇ ಸಮಿತಿ ವತಿಯಿಂದ ಈ ವರ್ಷದ ಮಿಲಾದ್ ಸಮಾವೇಶ ಹಾಗೂ ವಾರ್ಷಿಕ ಮಹಾಸಭೆ ದುಬೈ ಕ್ರೀಕ್ನಲ್ಲಿರುವ ಕ್ರೂಸ್ ಬೋಟ್ನಲ್ಲಿ ನಡೆಸಲಾಯಿತು. ಸಮಿತಿ ಅಧ್ಯಕ್ಷ ಹೆಚ್. ಅಬ್ದುಲ್ಲಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಂಝ ಸಅದಿ ಉದ್ಘಾಟಿಸಿದರು.
ಆಗಸ್ಟ್ ತಿಂಗಳಿನಲ್ಲಿ ಕೊಡಗಿನಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸರ್ವವನ್ನು ಕಳೆದುಕೊಂಡು ಬೀದಿಪಾಲಾದ ಜನರ ಕಣ್ಣೀರೊರೆಸಲು ತನ್ನ ಒಂದೂವರೆ ಎಕರೆ ಜಮೀನನ್ನು ದಾನವಾಗಿ ನೀಡಿದ ಕೊಂಡಂಗೇರಿಯ ಅಬ್ದುಲ್ಲಾ ಹಾಜಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು, ಅವರನ್ನು ಈ ಸಂದರ್ಭ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಶಾಫಿ ಸಖಾಫಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಿತು. ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಸಭೆಗೆ ಹೊಸ ಹುರುಪನ್ನು ನೀಡಿತು.
ಹಾಲಿ ವರ್ಷದಲ್ಲಿ ಊರಿನಲ್ಲಿ ನಡೆಸಿದ ಸಾಂತ್ವನ ಕಾರ್ಯಗಳನ್ನು ವಿವರಿಸಿ ವಾರ್ಷಿಕ ವರದಿಯನ್ನು ವಾಚಿಸಲಾಯಿತು. ನೂತನ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹೆಚ್.ಹೆಚ್. ಅಬ್ದುಲ್ಲ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಎ.ಹೆಚ್. ಇರ್ಷಾದ್ ಹಾಗೂ ಕೋಶಾಧಿಕಾರಿಯಾಗಿ ಪಿ.ಇ. ಮುಹಮ್ಮದ್ ಹಾಜಿ ಅವರನ್ನು ಪುನರಾಯ್ಕೆ ಮಾಡಲಾಯಿತು. ಅದೇ ರೀತಿ 15 ಸದಸ್ಯರುಗಳನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಹಿರಿಯ ಸದಸ್ಯರುಗಳಾದ ಅಬ್ದುಲ್ಲಾ ಎಲಿಯಂಗಾಡು, ಅಬ್ದುಲ್ಲಾ ಮುಸ್ಲಿಯಾರ್, ಹೆಚ್.ವೈ. ಅಝೀಝ್, ಹಸ್ಸನ್ ಕುಂಞ ಕೇತುಮೊಟ್ಟೆ ಸೇರಿದಂತೆ ಯುಎಇಯ ವಿವಿಧ ಕಡೆಗಳಲ್ಲಿ ಕಾರ್ಯನಿರ್ವಹಿಸುವ ಹಲವಾರು ಕೊಂಡಂಗೇರಿಯ ಸದಸ್ಯರುಗಳು ಭಾಗವಹಿಸಿದ್ದರು. ಕೆ.ವೈ. ರಿಯಾಝ್ ಸ್ವಾಗತಿಸಿದರು. ಎ.ಹೆಚ್. ಇರ್ಷಾದ್ ಕಾರ್ಯಕ್ರಮ ನಿರೂಪಿಸಿದರೆ, ಪಿ.ಎ. ಮುಜೀಬ್ ವಂದಿಸಿದರು.