ಸೋಮವಾರಪೇಟೆ, ಅ. 31: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನವೆಂಬರ್ 1 ರಂದು (ಇಂದು) ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯುವ ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಪಟ್ಟಣವನ್ನು ತಳಿರುತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದ್ದು, ಖಾಸಗಿ ಬಸ್ ನಿಲ್ದಾಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ.

ನ. 1 ರಂದು ಬೆಳಿಗ್ಗೆ 7 ಗಂಟೆಗೆ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಲಿದ್ದು, 7.30ಕ್ಕೆ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಲಾಗುವದು. 8.30ಕ್ಕೆ ಕಕ್ಕೆಹೊಳೆ ಜಂಕ್ಷನ್‍ನಿಂದ ಡೊಳ್ಳುಕುಣಿತ ತಂಡದೊಂದಿಗೆ ಆಟೋಗಳ ಮೆರವಣಿಗೆ ನಡೆಯಲಿದ್ದು, ಈ ಸಂದರ್ಭ ನಗರದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವದು. 10 ಗಂಟೆಗೆ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗುವ ವೇದಿಕೆಯಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.

ಸಭಾ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದು, ಮಾಜಿ ಸಚಿವ ಬಿ.ಎ. ಜೀವಿಜಯ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ತಹಶೀಲ್ದಾರ್ ಗೋವಿಂದರಾಜು, ಜಿ.ಪಂ. ಸದಸ್ಯರುಗಳಾದ ಕೆ.ಪಿ. ಚಂದ್ರಕಲಾ, ದೀಪಕ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಪೂರ್ವಾಹ್ನ 11 ಗಂಟೆಯಿಂದ ಶಾಲಾ ಮಕ್ಕಳಿಗೆ ಕುಣಿಯೋಣ ಬಾರಾ-ನೃತ್ಯ ಸ್ಪರ್ಧೆ ನಡೆಯಲಿದ್ದು, ಮಧ್ಯಾಹ್ನ 1ಕ್ಕೆ ಸಾರ್ವಜನಿಕರಿಗೆ ಅನ್ನದಾನ ಆಯೋಜಿಸಲಾಗಿದೆ. ಸಂಜೆ 6 ಗಂಟೆಯಿಂದ ರಾಜ್ಯೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಐಎನ್‍ಟಿಯುಸಿ ರಾಜ್ಯ ಕಾರ್ಯದರ್ಶಿ ನಾಪಂಡ ಮುತ್ತಪ್ಪ, ಉಪಾಧ್ಯಕ್ಷ ನಾಪಂಡ ಮುದ್ದಪ್ಪ, ದಾನಿಗಳಾದ ಹರಪಳ್ಳಿ ರವೀಂದ್ರ, ಒಕ್ಕಲಿಗರ ಸಂಘದ ನಿರ್ದೇಶಕ ಹೆಚ್.ಕೆ. ಶೇಖರ್, ವಿಎಸ್‍ಎಸ್‍ಎನ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.

ನಂತರ ಉದಯ ಟಿ.ವಿ. ರೂಪೇಶ್ ಅವರ ಜಾಲಿಬಾಯ್ಸ್ ತಂಡದಿಂದ ಸಂಗೀತ ರಸಮಂಜರಿ, ಕಲರ್ಸ್ ಸೂಪರ್‍ನ ಕನ್ನಡ ಕೋಗಿಲೆ ಖ್ಯಾತಿಯ ಗಾಯಕ ಖಾಸಿಂ, ನೀತು ಸುಬ್ರಮಣ್ಯ, ಜೂನಿಯರ್ ಶಂಕರ್‍ನಾಗ್, ಜೂ. ರವಿಚಂದ್ರನ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‍ನ ನೃತ್ಯಪಟುಗಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಬಜೆಗುಂಡಿಯ ಕೆ.ವಿ. ಪ್ರಭಾಕರ್, ಮಾಜಿ ಸೈನಿಕ ಎಂ.ಪಿ. ಪೂವಯ್ಯ, ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಸೆಸ್ಕ್ ಇಲಾಖೆಯ ಸದಾಶಿವ ಜಾದವ್, ಕ್ರೀಡಾಕ್ಷೇತ್ರದ ಸಾಧನೆಗಾಗಿ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಸಚಿನ್ ಪೂವಯ್ಯ ಅವರುಗಳನ್ನು ಸಂಘದಿಂದ ಸನ್ಮಾನಿಸಲಾಗುವದು ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಮೋಹನ್ ಮಾಹಿತಿ ನೀಡಿದ್ದಾರೆ.

ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಗಂಗಾಧರ್, ಉಪಾಧ್ಯಕ್ಷ ಫಾರೂಕ್, ಖಜಾಂಚಿ ಮಹಮ್ಮದ್ ಶಫಿ, ಉಪ ಕಾರ್ಯದರ್ಶಿ ಜನಾರ್ಧನ್ ಸಹ ಕಾರ್ಯದರ್ಶಿ ಕೆ.ಪಿ. ಸುರೇಶ್, ರಾಜ್ಯೋತ್ಸವ ಸಮಿತಿ ಗೌರವಾಧ್ಯಕ್ಷ ಪಾಣತ್ತಲೆ ಶಶಿಧರ್, ಸಂಘದ ಗೌರವಾಧ್ಯಕ್ಷ ಬಿ.ಪಿ. ಗಣೇಶ್, ಸಲಹೆಗಾರ ರಾಮು ಸೇರಿದಂತೆ ಸದಸ್ಯರುಗಳು ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.