ಮಡಿಕೇರಿ, ಅ. 24 : ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇರುವ ಮಡಿಕೇರಿಯ ಜೋಡುಪಾಲ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಸುಮಾರು ನಾಲ್ಕರಿಂದ ಐದು ಕಾಡಾನೆಗಳ ಹಿಂಡು ಗ್ರಾಮದ ಬಹುತೇಕ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ತಾ.17 ರಂದೇ ಅರಣ್ಯಾಧಿಕಾರಿ ಗಳಿಗೆ ಮನವಿ ಪತ್ರ ನೀಡಿದ ಗ್ರಾಮಸ್ಥರು ಆನೆಗಳನ್ನು ಕಾಡಿಗಟ್ಟುವಂತೆ ಒತ್ತಾಯಿಸಿದ್ದರು. ಆದರೆ ತಾ. 20 ಕ್ಕೆ ಗ್ರಾಮಕ್ಕೆ ಭೇಟಿ ನೀಡಿದ ಡಿಆರ್‍ಎಫ್‍ಒ ಹಾಗೂ ಸಿಬ್ಬಂದಿ ವರ್ಗ ಕಾಡಾನೆ ವಿರುದ್ಧ ಕಾರ್ಯಾಚರಣೆ ನಡೆಸದೆ ಮಳೆ ಬಂತು ಎನ್ನುವ ನೆಪವೊಡ್ಡಿ ಮರಳಿದ್ದಾರೆ. ಸ್ಥಳೀಯರು ಜೀವ ಭಯದಲ್ಲಿದ್ದರೂ ಕನಿಷ್ಟ ಪಟಾಕಿಯನ್ನು ಕೂಡ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಇಂದು ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕಾಡಾನೆಗಳು ಬಹುತೇಕ ಎಲ್ಲಾ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಪಡಿಸಿವೆ. ಕಾಫಿ ಹಾಗೂ ಬಾಳೆ ಕೃಷಿ ಸಂಪೂರ್ಣವಾಗಿ ಹಾನಿಗೀಡಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಲಕ್ಷಾಂತರ ರೂ. ನಷ್ಟವಾಗಿದೆ ಎಂದು ತಿಳಿಸಿರುವ ಸ್ಥಳೀಯರು, ಅರಣ್ಯ ಇಲಾಖೆ ಜೀವಹಾನಿ ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಮನವಿ ನೀಡುವ ಸಂದರ್ಭ ಗ್ರಾಮದ ಪ್ರಮುಖರಾದ ಜಿ.ಎ.ಶರ್ಮಿಳ, ಪ್ರಮೀಳ, ಸುನೀಲ್, ಸುಂದರ ನಾಯಕ ಮತ್ತಿತರರು ಹಾಜರಿದ್ದರು.