ಸೋಮವಾರಪೇಟೆ,ಅ.16: ಮಳೆ ಸುರಿಯುತ್ತಿದ್ದ ಸಂದರ್ಭ ಮನೆಯ ಗೋಡೆಗೆ ಸಿಡಿಲು ಬಡಿದು ಗೋಡೆ ಹಾನಿಯಾಗಿ, ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.
ಗ್ರಾಮದ ನಿವಾಸಿ ಪರಮೇಶ್ ಎಂಬವರ ಮನೆಯ ಗೋಡೆಗೆ ಸಿಡಿಲು ಬಡಿದ ಪರಿಣಾಮ ಗೋಡೆ ಬಿರುಕುಬಿಟ್ಟಿದೆ. ಟೈಲ್ಸ್ಗಳು ಒಡೆದಿವೆ. ಮನೆಯೊಳಗಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಪರಮೇಶ್ ಅವರು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.
ಕೂಡಿಗೆ ಕಣಿವೆ ಹೆಬ್ಬಾಲೆ ಭಾಗದಲ್ಲಿ ಮಧ್ಯಾಹ್ನ 2 ಇಂಚಿಗೂ ಅಧಿಕ ಮಳೆ ಸುರಿದಿದೆ. ಈ ಪ್ರದೇಶದಲ್ಲಿ ಬೆಳೆಗಳು ಹಾಳಾಗಿವೆ.
ಕುಶಾಲನಗರ ಸುತ್ತಮುತ್ತ ಬುಧವಾರ ಮಧ್ಯಾಹ್ನ ಭಾರೀ ಗಾಳಿ ಮಳೆ ಸುರಿಯಿತು. ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಯಾವದೇ ಅಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.