ಕೂಡಿಗೆ, ಅ. 16: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ವಾಣಿಜ್ಯ ಬೆಳೆಯಾದ ಶುಂಠಿಯನ್ನು ಬೆಳೆಯಲಾಗುತ್ತಿದೆ. ಶುಂಠಿ ಬೆಳೆಯ ಬೇಸಾಯ ಮಾಡಿ ನಾಲ್ಕು ತಿಂಗಳು ಕಳೆದಿದ್ದು, ಈ ಭಾಗದ ನೂರಾರು ರೈತರು ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಬೆಳೆಯನ್ನು ಬೆಳೆದಿದ್ದಾರೆ.
ಆದರೆ ಈ ಸಾಲಿನಲ್ಲಿ ಅತಿಯಾದ ಮಳೆ, ಕಡ್ಡಿ ರೋಗ, ಮಹಾಕಾಳಿ ರೋಗಗಳಿಂದಾಗಿ ಶುಂಠಿ ಬೆಳೆಯ ಇಳುವರಿಯಲ್ಲಿ ಕುಂಠಿತಗೊಂಡಿದೆ. ಇದೀಗ ಈ ರೋಗಗಳ ಬಾಧೆಯಿಂದ ರೈತರು ಇದ್ದ ಶುಂಠಿಯನ್ನು ಕಿತ್ತು ಮಾರಾಟ ಮಾಡಿ, ಕೈಗೆ ಸಿಕ್ಕ ಹಣವನ್ನು ಪಡೆಯುತ್ತಿದ್ದಾರೆ.
ಕಳೆದ ಸಾಲಿನಲ್ಲಿ ರೂ. 3000 ದಿಂದ ರೂ. 3500 ಬೆಲೆ ಇದ್ದ ಶುಂಠಿಗೆ ಈ ಸಾಲಿನಲ್ಲಿ 60 ಕೆ.ಜಿಯ ಒಂದು ಚೀಲ ಶುಂಠಿಗೆ ರೂ. 2000 ರಿಂದ ರೂ. 2200 ಬೆಲೆಗೆ ಇಳಿದಿದೆ. ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಶುಂಠಿ ಬೆಳೆಯು ಅತಿಯಾದ ಮಳೆಯಾದರೂ ಅಳಿದುಳಿದ ಬೆಳೆಗೆ ಈ ಸಾಲಿನಲ್ಲಿ ಸರಿಯಾದ ಬೆಲೆ ಇಲ್ಲದೆ, ರೈತರಲ್ಲಿ ಆತಂಕ ಮೂಡಿದೆ.