ಮಡಿಕೇರಿ, ಅ. 2: ಸಂಪಾಜೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಕುಮಾರ್ ಚೆದ್ಕಾರ್ ಅಧ್ಯಕ್ಷತೆಯಲ್ಲಿ ಸಂಪಾಜೆ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.
ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಸ್ಥಳದ ಬಗ್ಗೆ ಚರ್ಚೆ ನಡೆಸಿ ಸರಕಾರಕ್ಕೆ ಸ್ಥಳ ಗುರುತಿಸಲು ಪತ್ರ ಬರೆಯಲು ನಿರ್ಣಯಿಸಲಾಯಿತು. ಕಲ್ಲಾಳ ರಸ್ತೆಯನ್ನು ಗ್ರಾಮ ಸಡಕ್ ಯೋಜನೆಗೆ ಸೇರ್ಪಡೆ ಮಾಡಿ ಸರಕಾರಕ್ಕೆ ಅನುದಾನ ಕೋರಿ ಪತ್ರ ಬರೆಯಲು ತೀರ್ಮಾನಿಸಲಾಯಿತು.
ರಸ್ತೆ, ಕುಡಿಯುವ ನೀರು, ಬೀದಿ ದೀಪಗಳ ಬಗ್ಗೆ ಚರ್ಚೆ ನಡೆಸಿ, ಗ್ರಾಮದ ಪಂಚಾಯಿತಿ ರಸ್ತೆ ವಿಪರೀತ ಗಾಳಿ-ಮಳೆಯಿಂದ ಹಾನಿಯಾದ ಬಗ್ಗೆ ಸರಕಾರಕ್ಕೆ ಅನುದಾನ ಕೋರುವಂತೆ ತೀರ್ಮಾನಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ವರದಿ ವಾಚಿಸಿದರು. ಉಪಾಧ್ಯಕ್ಷ ಸುಂದರ ಬಿಸಿಲುಮನೆ, ಸದಸ್ಯರಾದ ರಮಾದೇವಿ ಬಾಲಚಂದ್ರ ಕಳಗಿ, ಗಿರಿಜಾ, ಯಮುನಾ ಗಿರೀಶ್, ಕೃಷ್ಣ ಬೆಳ್ಚಪಾಡ, ರಾಜೇಶ್ವರಿ, ಮಾಲತಿ ಉಪಸ್ಥಿತರಿದ್ದರು.