ಮಡಿಕೇರಿ, ಸೆ. 25: ನಗರದ ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿಯು 24ನೇ ವರ್ಷದ ದಸರಾ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಅರೆಯಂಡ ಪ್ರಸನ್ನ ತಿಳಿಸಿದ್ದಾರೆ.

ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ಭ್ರಮರಾಂಬಿಕೆಯಿಂದ ಅರುಣಾಸುರ ವಧೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಿಂಡಿಗಲ್‍ನ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದು, 12 ಕಲಾಕೃತಿಗಳನ್ನು ಬಳಸಲಾಗುತ್ತಿದೆ. ಕಲಾಕೃತಿಗಳನ್ನು ಮಣಿ ಹಾಗೂ ತಂಡ ತಯಾರಿಸುತಿದ್ದು, ಪ್ರಮುಖ ಕಲಾಕೃತಿಯನ್ನು ಶೋ ಮ್ಯಾನ್ ಸ್ಟುಡಿಯೋ ಕಲಾವಿದರು ರಚಿಸುತ್ತಿದ್ದಾರೆ. ಧ್ವನಿವರ್ಧಕ ಹಾಗೂ ಸ್ಟುಡಿಯೋ ವ್ಯವಸ್ಥೆಯನ್ನು ಮಡಿಕೇರಿಯ ಸ್ವಾಗತ್ ಸಂಸ್ಥೆ ಮಾಡಲಿದೆ. ಪ್ಲಾಟ್‍ಫಾರಂ ನಿರ್ಮಾಣ ಹಾಗೂ ಟ್ರ್ಯಾಕ್ಟರ್ ಸೆಟ್ಟಿಂಗ್‍ನ್ನು ಸಮಿತಿಯ ಮಣಿ, ಗುರು ಮತ್ತು ತಂಡ ಮಾಡಲಿದೆ. ಕಲಾಕೃತಿಗಳಿಗೆ ಚಲನ - ವಲನವನ್ನು ಸಮಿತಿ ಸದಸ್ಯರೆ ನೀಡಲಿದ್ದಾರೆ ಎಂದು ಪ್ರಸನ್ನ ವಿವರಿಸಿದರು.

ಒಟ್ಟು 12 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಬಹುಮಾನಕ್ಕೆ ಪೈಪೋಟಿ ನೀಡಲಾಗುವದು. ಉತ್ಸವದ ಯಶಸ್ಸಿಗೆ 120 ಮಂದಿ ಸದಸ್ಯರ ತಂಡ ಶ್ರಮಿಸುತ್ತಿದ್ದು, ಕಕ್ಕಬೆಯ ವಾಲಗ ತಂಡ ಮಂಟಪವನ್ನು ಮುನ್ನಡೆಸಲಿದೆ ಎಂದು ಪ್ರಸನ್ನ ತಿಳಿಸಿದರು.

- ಉಜ್ವಲ್ ರಂಜಿತ್