ಕುಶಾಲನಗರ, ಸೆ. 22: ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 16 ವಾರ್ಡ್‍ಗಳನ್ನು ಬಯಲು ಮುಕ್ತ ಶೌಚಾಲಯವೆಂದು ಘೋಷಿಸಲಾಗಿದೆ ಎಂದು ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಸುಜಯ್ ಕುಮಾರ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಬಯಲು, ಚರಂಡಿ, ಎಲ್ಲೆಂದರಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವದು ಹಾಗೂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡದಂತೆ, ಹಸಿ, ಒಣ ಕಸವನ್ನು ಬೇರ್ಪಡಿಸಿ ನೀಡುವ ಮೂಲಕ ಸ್ವಚ್ಛ ಪಟ್ಟಣವನ್ನಾಗಿಸಲು ಅನೇಕ ನಿಯಮಗಳನ್ನು ಜಾರಿಗೆ ತರಲಾಗಿದೆ. ಎಲ್ಲಾ ಸಾರ್ವಜನಿಕರು ಉದ್ದಿಮೆದಾರರು ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಮತ್ತು ರಸ್ತೆ ಚರಂಡಿಗಳನ್ನು ಉತ್ತಮ ನಿರ್ವಹಣೆ ಮಾಡಲು ಈ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಮಲ-ಮೂತ್ರ ವಿಸರ್ಜನೆ, ಹಸಿ ಒಣ ಕಸವನ್ನು ಬೇರ್ಪಡಿಸದೆ ನೀಡುವದು, ಎಸೆಯುವದು, ಸುಡುವದು ಕಂಡುಬಂದಲ್ಲಿ ರೂ. 100 ದಂಡ, ಅದೇ ರೀತಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಅಥವಾ ಬಳಕೆ ಮಾಡಿದಲ್ಲಿ ರೂ. 1000 ದಂಡ ವಿಧಿಸಲಾಗುವದು ಎಂದು ತಿಳಿಸಿದ್ದಾರೆ. ಸಾರ್ವಜನಿಕರು ಪಟ್ಟಣ ಪಂಚಾಯಿತಿಯೊಂದಿಗೆ ಸಹಕರಿಸಿ ಪಟ್ಟಣದಲ್ಲಿ ನೈರ್ಮಲ್ಯತೆ ಕಾಪಾಡಲು ಸಹಕರಿಸಬೇಕೆಂದು ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.