ಮಡಿಕೇರಿ, ಸೆ. 18: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ಕಳೆದ 150ಕ್ಕೂ ಅಧಿಕ ವರ್ಷಗಳಿಂದ ಪಾಲ್ಗೊಳ್ಳುತ್ತಾ ದಶಮಂಟಪಗಳ ಸಾರಥಿಯಾಗಿರುವ ಪೇಟೆ ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿಯ ಉತ್ಸವಕ್ಕೆ ಸಜ್ಜಾಗುತ್ತಿದೆ ಎಂದು ಪೇಟೆ ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಬಿ.ಡಿ. ಭರತ್‍ಕುಮಾರ್ ತಿಳಿಸಿದ್ದಾರೆ.

ಅರ್ಧನಾರೀಶ್ವರ ದರ್ಶನ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗು ತ್ತಿದ್ದು, ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದೆ. ದಿಂಡಿಗಲ್‍ನ ಸೆಲ್ವಂ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದು, ಬೆಂಗಳೂರಿನಿಂದ ಧ್ವನಿವರ್ಧಕವನ್ನು ತರಿಸಲಾಗುತ್ತಿದೆ. ಆರು ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಅರ್ಧನಾರೀಶ್ವರ ಕಲಾಕೃತಿಯನ್ನು ಹೈದರಾಬಾದ್‍ನ ಕಲಾವಿದ ಮಧುಕರ್ ತಯಾರಿಸುತ್ತಿದ್ದಾರೆ. ಉಳಿದ ಕಲಾಕೃತಿಗಳನ್ನು ಬೆಂಗಳೂರಿನ ಕಲಾವಿದ ಕೇಶವ ಅವರು ರಚಿಸುತ್ತಿದ್ದಾರೆ ಎಂದು ಭರತ್ ಮಾಹಿತಿಯಿತ್ತರು. ಪ್ಲಾಟ್‍ಫಾರಂನ್ನು ಸಮಿತಿಯ ನಯಾಜ್ ಮತ್ತು ಅಂಜು ನಿರ್ಮಿಸಲಿದ್ದಾರೆ. ಒಟ್ಟು 4.50 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಸ್ಥಳೀಯ ವಾದ್ಯಗೋಷ್ಠಿ ಮಂಟಪವನ್ನು ಮುನ್ನಡೆಸಲಿದೆ. ಉತ್ಸವಕ್ಕಾಗಿ 80 ಮಂದಿ ಸದಸ್ಯರ ತಂಡ ಶ್ರಮಿಸುತ್ತಿದೆ ಎಂದು ಭರತ್‍ಕುಮಾರ್ ವಿವರಿಸಿದರು.

- ಉಜ್ವಲ್ ರಂಜಿತ್