ಗೋಣಿಕೊಪ್ಪ ವರದಿ, ಸೆ. 14: ಕಾಡಾನೆಗಳು ನಾಡಿಗೆ ನುಸುಳದಂತೆ ತಡೆಯಲು ನಿರ್ಮಿಸಿರುವ ರೈಲ್ವೆಕಂಬಿ ಯೋಜನೆ ಅನುಷ್ಠಾನ ತೀರಾ ಕಳಪೆಯಾಗಿರುವದರಿಂದ ಯೋಜನೆ ನೆಲಕಚ್ಚಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ತಿತಿಮತಿ ರೈತ ಮುಖಂಡರುಗಳು ಆಗ್ರಹಿಸಿದರು.

ಅರಣ್ಯದಿಂದ ಕಾಡಾನೆಗಳು ನುಸುಳದಂತೆ ನೊಕ್ಯ ಗ್ರಾಮ ವ್ಯಾಪ್ತಿಯಲ್ಲಿ ನಿರ್ಮಿಸಿರುವ ರೈಲ್ವೆಕಂಬಿ ಜೋಡಣೆ ಮುರಿದು ಬಿದ್ದಿರುವದರಿಂದ ಮತ್ತೆ ಕಾಡಾನೆಗಳು ಗ್ರಾಮಕ್ಕೆ ನುಸುಳಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ರೈತ ಸಂಘದ ತಿತಿಮತಿ ಭಾಗದ ರೈತ ಮುಖಂಡರುಗಳು ಒತ್ತಾಯಿಸಿದರು.

ಆನೆಗಳು ಮತ್ತೆ ಗ್ರಾಮಕ್ಕೆ ಲಗ್ಗೆ ಇಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ, ಕರುಣಾಕರ್, ಎಚ್. ಎಸ್. ಮಹೇಶ್, ಅಶೋಕ್, ಶ್ರೀನಿವಾಸ್ ಇವರುಗಳು ಯೋಜನೆ ತೀರಾ ಕಳಪೆ ಎಂದು ಆರೋಪಿಸಿದರು. ಸಾಕಷ್ಟು ಕಡೆಗಳಲ್ಲಿ ಕಂಬಿ ಜೋಡಣೆ ವೆಲ್ಡಿಂಗ್‍ನಲ್ಲಿನ ದೋಷ ಮತ್ತು ಜೋಡಣೆ ಕಳಪೆಯಿಂದ ಕೂಡಿದೆ. ಇದರಿಂದ ರಾಜಾರೋಷವಾಗಿ ಗ್ರಾಮಕ್ಕೆ ಲಗ್ಗೆ ಇಡುತ್ತಿವೆ. ಅಧಿಕಾರಿಗಳು ಜಾಣಮೌನದಲ್ಲಿದ್ದಾರೆ ಎಂದು ಆರೋಪಿಸಿದರು.

ತಿತಿಮತಿ, ನೊಕ್ಯ, ದೇವರಪುರ, ಮಾಯಮುಡಿ ವ್ಯಾಪ್ತಿಗೆ ಮತ್ತಿಗೋಡು ವನ್ಯಜೀವಿ ವಲಯದಿಂದ ಆನೆಗಳು ಬರದಂತೆ ಯೋಜನೆ ಅನುಷ್ಠಾನವಾಗಿದೆ. ಆದರೆ, ಅನುಷ್ಠಾನಗೊಂಡ 20 ದಿನಗಳಲ್ಲಿಯೇ ಕಂಬಿ ನೆಲಕಚ್ಚಿದೆ. ಆನೆಗಳು ಗ್ರಾಮಕ್ಕೆ ನುಗ್ಗುತ್ತಿರುವದರಿಂದ ಬೆಳೆ ನಾಶವಾಗಿದೆ ಎಂದು ಹೇಳಿದರು.

ಈ ಬಗ್ಗೆ ಎಸಿಎಫ್ ಪ್ರಸನ್ನಕುಮಾರ್, ಆರ್‍ಎಫ್‍ಒ ಶಿವಾನಂದ್ ಗಮನಕ್ಕೆ ತರಲಾಗಿದೆ. ಉತ್ತಮ ಸ್ಪಂದನೆ ದೊರೆತಿಲ್ಲ. ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಯಬೇಕಿದೆ. ಕಾಡಾನೆಗಳನ್ನು ಶಾಶ್ವತವಾಗಿ ಗ್ರಾಮದಿಂದ ದೂರ ಇಡಲು ಸುಮಾರು ರೂ. 90 ಲಕ್ಷದಷ್ಟು ಹಣ ಖರ್ಚು ಮಾಡಿದ್ದರೂ, ಇದೀಗ ಪ್ರಯೋಜನವಿಲ್ಲದೆ ಪೋಲಾಗಿದೆ ಎಂದು ನೋವು ಹಂಚಿಕೊಂಡರು.