ಮಡಿಕೇರಿ, ಸೆ. 5: ಮಡಿಕೇರಿ ರೋಟರಿ ಕ್ಲಬ್‍ನಿಂದ ತ್ಯಾಗರಾಜ ನಗರದ ಶಕ್ತಿಧಾಮ ವೃದ್ಧಾಶ್ರಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ರೋಟರಿ ಅಧ್ಯಕ್ಷ ರತನ್ ತಮ್ಮಯ್ಯ ನೇತೃತ್ವದಲ್ಲಿ ಶಕ್ತಿಧಾಮ ವೃದ್ಧಾಶ್ರಮದ 23 ಹಿರಿಯ ನಾಗರಿಕರಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಮಡಿಕೇರಿ ರೋಟರಿ ಸದಸ್ಯರುಗಳಾದ ಡಾ. ಮನೋಹರ್ ಜಿ. ಪಾಟ್ಕರ್, ಡಾ. ಮೋಹನ್ ಅಪ್ಪಾಜಿ, ಡಾ. ರವಿಕರುಂಬಯ್ಯ, ಡಾ. ದೇವಯ್ಯ, ಡಾ. ಜನಾರ್ಧನ್, ಶಕ್ತಿಧಾಮದಲ್ಲಿದ್ದವರ ಸಕ್ಕರೆ ಪ್ರಮಾಣ, ರಕ್ತದೊತ್ತಡ, ತೂಕ ಪರೀಕ್ಷೆ ಸೇರಿದಂತೆ ವಿವಿಧ ರೀತಿಯ ಆರೋಗ್ಯ ತಪಾಸಣೆ ನಡೆಸಿದರು. ಹಿರಿಯ ನಾಗರಿಕರಿಗೆ ಔಷಧಿಗಳನ್ನು ಡಾ. ಪಾಟ್ಕರ್ ಉಚಿತವಾಗಿ ನೀಡಿದರು. ಅಂತೆಯೇ ಮಾಪಕ ಯಂತ್ರವನ್ನೂ ರೋಟರಿಯಿಂದ ಕೊಡುಗೆಯಾಗಿ ನೀಡಲಾಯಿತು. ವೃದ್ಧಾಶ್ರಮದಲ್ಲಿ ಆಶ್ರಯ ಪಡೆದವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವ ಪ್ರಯಾಣ ವೆಚ್ಚವನ್ನೂ ರೋಟರಿಯಿಂದ ನೀಡಲು ತೀರ್ಮಾನಿಸಲಾಗಿದೆ. ಮಡಿಕೇರಿ ರೋಟರಿ ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ, ಸಮುದಾಯ ಸೇವಾ ಯೋಜನೆ ನಿರ್ದೇಶಕ ಎಂ.ಎಂ. ಕಾರ್ಯಪ್ಪ ಸೇರಿದಂತೆ ರೋಟರಿ ಸದಸ್ಯರು ಹಾಜರಿದ್ದರು.