ಸುಂಟಿಕೊಪ್ಪ, ಆ. 25: ಮಾದಾಪುರ ಗ್ರಾಮ ಪಂಚಾಯಿತಿ ವಿಭಾಗದ ಮೂವತ್ತೊಕ್ಲು ಗ್ರಾಮದಲ್ಲಿ ಕಳೆದ 1 ತಿಂಗಳಿನಿಂದ ಕುಡಿಯುವ ನೀರಿನ ಬವಣೆ ತಲೆ ತೋರಿದ್ದು, ಗ್ರಾಮಸ್ಥರ ಮನವಿಗೆ ಪಂಚಾಯಿತಿ ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2018 ಜಲ ಪ್ರಳಯದಿಂದ ಭೂಕುಸಿತಕ್ಕೊಳಗಾಗಿ ಈ ವಿಭಾಗ ಕೃಷಿಕರ ಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ ಮುಕ್ಕಾಟಿರ ಉತ್ತಪ್ಪ ಅವರು ಭೂಕುಸಿತದಿಂದ ಪ್ರಾಣವನ್ನೇ ಕಳೆದುಕೊಂಡರು ಅನೇಕ ಮಂದಿಯ ಮನೆ ತೋಟ ಅತಿವೃಷ್ಟಿಗೆ ಬಲಿಯಾದರೂ ಸರಕಾರದಿಂದ ಅಲ್ಪ ಸ್ವಲ್ಪ ಪರಿಹಾರ ಬಿಟ್ಟರೆ ಏನೇನೂ ಸಿಗಲಿಲ್ಲ. ಇದರಿಂದ ಇನ್ನೂ ಚೇತರಿಸಿಕೊಳ್ಳಲಾಗದೆ ಚಡಪಡಿಸುತ್ತಿದ್ದು ಈ ಮಳೆಗಾಲದಲ್ಲೂ ನಮಗೆ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ವಿದ್ಯುತ್ ಸಮಸ್ಯೆ ಮಳೆಗಾಲ ಆರಂಭದಿಂದಲೇ ಕಾಡತೊಡಗಿದೆ. ಸಂಬಂಧಿಸಿದ ಇಲಾಖೆಗೆ, ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವದೇ ರೀತಿಯ ಕ್ರಮಕೈಗೊಂಡಿಲ್ಲ ಮೂಲಭೂತ ಸೌಕರ್ಯ ಒದಗಿಸದ ಸ್ಥಳೀಯ ಗ್ರಾ.ಪಂ. ಆಡಳಿತ ಇದ್ದರೆಷ್ಟು ಹೋದರೆಷ್ಟು ಗ್ರಾ.ಪಂ. ಸದಸ್ಯರುಗಳಿಗೆ ಜನರ ಆಶೋತ್ತರಗಳನ್ನು ಈಡೇರಿಸುವ ಕಾಳಜಿ ಒಂದಿಷ್ಟು ಇಲ್ಲದಾಗಿದೆ. 5 ದಿನದಲ್ಲಿ ಕುಡಿಯುವ ನೀರು ವಿದ್ಯುತ್ ಸಂಪರ್ಕ ಒದಗಿಸದಿದ್ದಲಿ ಗ್ರಾ.ಪಂ. ಮುಂದೆ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಲಾಗುವದೆಂದು ವಿಪಿನ್, ಮಧು, ಉಣ್ಣಿಕೃಷ್ಣ ಅವರು ತಿಳಿಸಿದ್ದಾರೆ.