ಸುಂಟಿಕೊಪ್ಪ, ಆ. 13: ಸುಂಟಿಕೊಪ್ಪದ ಸುತ್ತಮುತ್ತಲಿನ ತೋಟಗಳಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಬೆಳೆ ಫಸಲುಗಳು ನಾಶಗೊಂಡು ತೋಟದ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ.
ಇಲ್ಲಿಗೆ ಸಮೀಪದ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಗೆ ಸೇರಿದ ಕೊಳಂಬೆ ಗ್ರಾಮದಲ್ಲಿರುವ ಮಿಲನ್ ಅವರ ಗದ್ದೆ, ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ತೋಟ ದಲ್ಲಿರುವ ನೀರಿನ ಪೈಪ್ ಕಾಫಿ, ಕಿತ್ತಳೆ ಫಸಲು ಗಳನ್ನು ಮತ್ತು ಭತ್ತದ ಕೃಷಿಗೆ ಬೀಜ ಹಾಕಿ ಮೊಳಕೆ ಬಂದ ಸಸಿಗಳನ್ನು ತುಳಿದು ನಾಶ ಮಾಡಿ ನಷ್ಟಪಡಿಸಿವೆ. ಕಳೆದ 2 ವಾರದಿಂದ ಈ ಭಾಗದಲ್ಲೇ ಕಾಡಾನೆಗಳ ಗುಂಪು ನೆಲೆವೂರಿದ್ದು, ಸುತ್ತಮುತ್ತಲಿನ ತೋಟಗಳ ಫಸಲನ್ನು ದ್ವಂಸಗೊಳಿಸುತ್ತಿರುವ ಬಗ್ಗೆ ತಿಳಿಸಿದ ಮಿಲನ್ ತೋಟದಲ್ಲಿಯೇ ಕಾಡಾನೆಗಳು ಬೀಡುಬಿಡುತ್ತಿದ್ದು, ಕಾಡಾನೆಗಳು ಸಂಚರಿಸುವ ಸ್ಥಳಗಳಲ್ಲಿ ಕಾಫಿ ಗಿಡಗಳು ಸಂಪೂರ್ಣ ಹಾಳಾಗುತ್ತಿವೆ.
ಮುಂದಿನ ದಿನಗಳಲ್ಲಿ ಹೀಗೆಯೇ ಮುಂದುವರೆದರೆ ಜೀವನ ಸಾಗಿಸುವದಕ್ಕೂ ಕಷ್ಟಪಡಬೇಕಾಗುತ್ತದೆ. ಮಳೆ ಅಬ್ಬರದಿಂದ ಕಾಫಿ ಕೊಳೆಯುತ್ತಿದ್ದು ಜೊತೆಗೆ ಆನೆ ಕಾಟದಿಂದ ರೈತ ಮುಂದಿನ ದಿಗಳಲ್ಲಿ ನೆಮ್ಮದಿ ಜೀವನ ನಡೆಸಲು ಅಸಾಧ್ಯ.
ಅರಣ್ಯ ಇಲಾಖೆ ಕಾಡಾನೆ ಹಾವಳಿಯನ್ನು ಕೂಡಲೇ ನಿಯಂತ್ರಿಸದಿದ್ದಲ್ಲಿ ರೈತರು ಕೃಷಿಯನ್ನು ನಂಬಿ ಬದುಕುವದು ಕಷ್ಟ ಸಾಧ್ಯವಾಗಿದೆ ಎಂದು ಹೇಳಿದರು. ತೋಟದ ಕಾರ್ಮಿಕರು ಈ ಕಾಡಾನೆಗಳ ಹಾವಳಿಯಿಂದ ಕೆಲಸವಿಲ್ಲದೆ ಕಾಲಕಳೆಯುವಂತಹ ಪರಿಸ್ಥಿತಿ ಎದುರಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರೂ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯ ಕೈಗೊಂಡಿಲ್ಲ ಎಂದು ದೂರಿದ್ದಾರೆ.