ಮಡಿಕೇರಿ, ಆ. 13: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಹಲವಾರು ಜಾನುವಾರುಗಳು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿವೆ. ಪ್ರವಾಹವು ಇಳಿಮುಖವಾಗುವಾಗ ಮರಣಿಸಿದ ಪ್ರಾಣಿಗಳ ಕಳೇಬರ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಕಳೆಬರಗಳು ಕೊಳೆತು ಹೋಗಿರುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಪ್ರಾಣಿಜನ್ಯ ರೋಗಗಳು ಹಾಗೂ ಇತರ ಜಾನುವಾರು ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಣಿಗಳ ಮೃತ ದೇಹಗಳನ್ನು ಅಚ್ಚುಕಟ್ಟಾಗಿ ವಿಲೇವಾರಿ ಮಾಡಬೇಕಾಗಿರುತ್ತದೆ ಅದಕ್ಕಾಗಿ ಸಾರ್ವಜನಿಕರ ಸಹಕಾರ ಕೂಡ ಅವಶ್ಯಕವಾಗಿದೆ.

ಈ ನಿಟ್ಟಿನಲ್ಲಿ ಪ್ರವಾಹದಿಂದ ಮೃತಪಟ್ಟ ಜಾನುವಾರಗಳ ಕಳೆಬರಗಳು ಕಂಡುಬಂದಲ್ಲಿ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 08272-221077, ಪೊಲೀಸ್ ಸಹಾಯವಾಣಿ-100, ಪಶುಪಾಲನಾ ಇಲಾಖೆಯ ಸಹಾಯವಾಣಿ ಮಡಿಕೇರಿ-08272-229449,228805. ಸೋಮವಾರಪೇಟೆ-282127, ವೀರಾಜಪೇಟೆ-257228 ಸಂಪರ್ಕಿಸಬೇಕಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ತಮ್ಮಯ್ಯ ಅವರು ತಿಳಿಸಿದ್ದಾರೆ.

ಜಾನುವಾರು ರಕ್ಷಣೆ-ಆರೈಕೆಗೆ ಅಗತ್ಯ ಕ್ರಮ

ಸ್ಥಳೀಯವರ ಸಹಕಾರದಿಂದ ಸಂತ್ರಸ್ತ ಜಾನುವಾರು ಪಾಲಕರ ಜಾನುವಾರುಗಳ ಆರೈಕೆಗಾಗಿ ಕ್ರಮ ವಹಿಸಲಾಗಿದೆ. ರೋಗೋದ್ರೇಕ ಉಂಟಾಗದಂತೆ ಅಗತ್ಯ ಜೌಷಧಿ ಮತ್ತು ಲಸಿಕೆಗಳನ್ನು ಸ್ಥಳೀಯ ಪಶು ವೈದ್ಯ ಸಂಸ್ಥೆಗಳ ಮೂಲಕ ವಿತರಿಸಲು ಮತ್ತು ಲಸಿಕೆ ಹಾಕುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಲ್ಲದೆ ಸಂತ್ರಸ್ತ ಜಾನುವಾರುಗಳಿಗೆ ಪಶು ಆಹಾರವನ್ನು ಮತ್ತು ಅಗತ್ಯ ಲವಣ ಮಿಶ್ರಣದ ಪೊಟ್ಟಣಗಳನ್ನು ವಿತರಿಸಲಾಗುವದು ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ತಮ್ಮಯ್ಯ ತಿಳಿಸಿದ್ದಾರೆ.

ಸಂತ್ರಸ್ತ ಮತ್ತು ರಕ್ಷಿಸಲಾದ ಜಾನುವಾರುಗಳಿಗೆ ಸುಂಟಿಕೊಪ್ಪದಲ್ಲಿ ತಾತ್ಕಾಲಿಕ ಗೋಶಾಲೆ ಪ್ರಾರಂಭಿಸಿ ಈಗಾಗಲೇ ಕಂಡುಬಂದ ಜಾನುವಾರುಗಳನ್ನು ಅಲ್ಲಿಗೆ ಸಾಗಿಸಿ ಆರೈಕೆ ಮಾಡಲಾಗುತ್ತಿದೆ. ಅವಶ್ಯವಿರುವ ಸಂತ್ರಸ್ತ ಜಾನುವಾರು ಮಾಲೀಕರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಅತಿವೃಷ್ಟಿಯಿಂದ ಮತ್ತು ಪ್ರವಾಹದಿಂದ ಮರಣಿಸಿದ ಜಾನುವಾರುಗಳಿಗೆ ಪರಿಹಾರ ನೀಡುವ ಸಲುವಾಗಿ ಮರಣಿಸಿದ ಜಾನುವಾರುಗಳ ಮಾಲೀಕರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ತೆರಳಿ ಇಲಾಖೆಯ ಪಶು ವೈದ್ಯರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರವಾಹ ಇಳಿಮುಖವಾದಾಗ ಹೆಚ್ಚಿನ ಜಾನುವಾರುಗಳ ಪ್ರಾಣಹಾನಿ ವರದಿ ದೊರಕುವ ಸಾದ್ಯತೆಯಿರುವದರಿಂದ ತಾಲೂಕು ಮಟ್ಟದಲ್ಲಿ ತಂಡವನ್ನು ರಚಿಸಿ ಶೀಘ್ರವಾಗಿ ಕ್ರಮವಹಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ-11 ದನಗಳು, 10 ಆಡುಗಳು ಒಟ್ಟು 21 ಜಾನುವಾರುಗಳು ಪ್ರಕೃತಿ ವಿಕೋಪದಿಂದ ಮರಣ ಹೊಂದಿದ್ದು, ಪರಿಹಾರ ನೀಡುವ ಸಲುವಾಗಿ ಅಗತ್ಯ ಕ್ರಮ ವಹಿಸಲಾಗಿದೆ. ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡುವ ಸಲುವಾಗಿ ಮರಣೋತ್ತರ ಪರೀಕ್ಷೆಯ ನಂತರ ಜಾನುವಾರುಗಳ ಕಳೆಬರದಿಂದ ಉಂಟಾಗಬಹುದಾದ ಪ್ರಾಣಿಜನ್ಯ ರೋಗಗಳು ಮತ್ತು ಇತರ ಮಾನವ ಆರೋಗ್ಯ ಸಮಸ್ಯೆಗಳು ಉಂಟಾಗದಂತೆ ಕಳೇಬರಹಗಳ ವಿಲೇವಾರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಸೂಕ್ತ ರೀತಿಯ ವಿಲೇವಾರಿ ಮಾಡುವಂತೆ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಉಪ ನಿರ್ದೇಶಕ ತಮ್ಮಯ್ಯ ತಿಳಿಸಿದ್ದಾರೆ.