ಮಡಿಕೇರಿ, ಆ.6 : ಕುಟ್ಟ ಕೊಡವ ಸಮಾಜದ ವತಿಯಿಂದ 7ನೇ ವರ್ಷದ ‘ಕಕ್ಕಡ ನಮ್ಮೆ’ ಸಂಭ್ರಮದಿಂದ ಜರುಗಿತು. ಕುಟ್ಟ ಕೊಡವ ಸಮಾಜದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಹಾಗೂ ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಕೊಡವ ಸಂಸ್ಕøತಿ, ಆಚಾರ ವಿಚಾರಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕೆಂದರು. ವಿಶಿಷ್ಟವಾದ ಕೊಡವ ಭಾಷೆ ಮತ್ತು ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಸರ್ವರೂ ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೈದ್ಯರಾದ ಅಪ್ಪನೆರವಂಡ ಡಾ. ಸೋನಿಯಾಮಂದಪ್ಪ ಪಶ್ಚಿಮಘಟ್ಟ ಪ್ರದೇಶದಲ್ಲಿ ಸಿಗುವ ಔಷಧೀಯ ಗುಣದ ಸಸ್ಯರಾಶಿಯಿಂದ ಮಾನವಕುಲ ಮತ್ತು ಪ್ರಾಣಿ ಸಂಕುಲಕ್ಕೆ ಆಗುತ್ತಿರುವ ಆರೋಗ್ಯ ಲಾಭದ ಕುರಿತು ವಿವರಿಸಿದರು.
ಪ್ರತಿಯೊಬ್ಬ ಕೊಡವರು ಪ್ರಪಂಚದ ಯಾವದೇ ಭಾಗದಲ್ಲಿದ್ದರೂ ಕೊಡಗಿನ ನೆಲ, ಜಲ, ಪರಿಸರ ಹಾಗೂ ಕೊಡವ ಆಚಾರ, ವಿಚಾರ ಸಂಸ್ಕøತಿಯನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು. ಪ್ರತಿಯೊಬ್ಬರೂ ಹಿರಿಯನ್ನು ಗೌರವಿಸಬೇಕು ಮತ್ತು ಕಿರಿಯರನ್ನು ಪ್ರೀತಿಸಬೇಕೆಂದು ಕಿವಿಮಾತು ಹೇಳಿದರು. ಕಕ್ಕಡ 18 ರ ಸಂದರ್ಭ ಸೇವಿಸುವ ವಿವಿಧ ಖಾದ್ಯಗಳು ದೇಹದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಸಮಾಜದ ಪ್ರಮುಖರಾದ ತೀತಿರ ರೆಹನ ಕಾರ್ಯಪ್ಪ, ಕಳ್ಳಿಚಂಡ ಕವಿತಾಉತ್ತಪ್ಪ, ಮುಕ್ಕಾಟೀರ ಕಾವೇರಿ ಸೋಮಣ್ಣ, ಮಚ್ಚಮಾಡ ಪದ್ಮ ಸೋಮಯ್ಯ, ಪಾಲೆಕಂಡ ಅನಿತಾ ಅಯ್ಯಣ್ಣ, ಮನೋಜ್ ಮಂದಣ್ಣ, ರಾಣಿ ಮೋಹನ್ ಹಾಗೂ ಎಲ್ಲಾ ಪದಾಧಿಕಾರಿಗಳು, ಕುಟ್ಟ ಕೊಡವ ಸಮಾಜದ ಅಧೀನದ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು. ಕೇಚಮಾಡ ಬೀನಾಉತ್ತಪ್ಪ ಪ್ರಾರ್ಥಿಸಿದರು, ಖಜಾಂಚಿ ಮಚ್ಚಮಾಡ ಸುಬ್ರಮಣಿ ನಿರೂಪಿಸಿ, ವಂದಿಸಿದರು.
ವಿವಿಧ ಬಗೆಯ 26 ಮಳಿಗೆಗಳು, 12 ಊಟ, ತಿಂಡಿ ಹಾಗೂ ಕಾಫಿ ಮಳಿಗೆ, ಸ್ವಸ್ಥ ಕೇಂದ್ರ, ರೀಬಿಲ್ಡ್ ಕೊಡಗು, ಕಾಲೂರು ಲೇಡಿಸ್ ಮೊಬೈಲ್ ಶಾಪ್ ಹಾಗೂ ವಿವಿಧ ಮೋಟಾರ್ ವಾಹನಗಳ ಮಾರಾಟ ಮತ್ತು ಪ್ರದರ್ಶನ ಗಮನ ಸೆಳೆಯಿತು. ಮೈಸೂರು, ಬೆಂಗಳೂರು, ಮಂಗಳೂರು, ಕೇರಳ ಸೇರಿದಂತೆ ವಿವಿಧ ಭಾಗಗಳ ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೈವಿಧ್ಯಮಯ ಮಳಿಗೆಗಳ ಮೂಲಕ ಆಕರ್ಷಿಸಿದರು. ಮೈಸೂರು, ಬೆಂಗಳೂರು, ಪುಣೆ, ನೆದರ್ಲ್ಯಾಂಡ್ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಿಶೇಷವಾಗಿ ಪಾಲ್ಗೊಂಡು ‘ಕಕ್ಕಡ ನಮ್ಮೆ’ಗೆ ಮೆರಗು ನೀಡಿದರು.