ಮಡಿಕೇರಿ, ಆ. 4: ಶ್ರೀ ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ನಿಯಮಿತ ಭಾಗಮಂಡಲ - ಕೊಡಗು ಮತ್ತು ಎಸ್.ಎಲ್.ಎನ್. ಗ್ಲೋಬಲ್ ಅಗ್ರಿ ಸೊಲ್ಯೂಷನ್ಸ್ ವೀರಾಜಪೇಟೆ ಹಾಗೂ ಫ್ಯೂಚರ್ ಬಯೋಟೆಕ್ ಕೃಷಿ ವಿಶ್ವವಿದ್ಯಾನಿಲಯ ಧಾರವಾಡ ಇದರ ಸಹಯೋಗದೊಂದಿಗೆ ಶ್ರೀ ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ನಿಯಮಿತ ಭಾಗಮಂಡಲ -ಕೊಡಗು ಇದರ ಸದಸ್ಯ ರೈತರಿಗೆ ಕರಿಕೆಯಲ್ಲಿ ಬೆಳೆಗಳ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕರಿಕೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ - ಕರಿಕೆ ಇದರ ಸಭಾಭವನದಲ್ಲಿ ಏರ್ಪಡಿಸಲಾದ ಕಾರ್ಯಕ್ರಮಕ್ಕೆ ಸುಮಾರು 150 ಜನ ಸದಸ್ಯ ರೈತರು ಭಾಗವಹಿಸಿದ್ದರು. ಕಂಪನಿಯ ಅಧ್ಯಕ್ಷ ಕೋಡಿ ಕೆ. ಪೊನ್ನಪ್ಪ ಅವರು ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಪ್ರಾರಂಭವಾದ ಈ ಕಂಪನಿಯು ರೈತರ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿದೆ.
ರೈತರು ಕಂಪನಿಯಲ್ಲಿ ದೊರೆಯುವ ಸೌಲಭ್ಯಗಳನ್ನು ಕಾಲ ಕಾಲಕ್ಕೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳುವದು ಸದಸ್ಯ ರೈತರ ಕರ್ತವ್ಯವೆಂದು ನುಡಿದರು. ಕಂಪನಿಯಲ್ಲಿ ಈಗಾಗಲೇ ರೈತ ಮಿತ್ರರಿಗೆ ಲಭ್ಯವಿರುವ ಯಂತ್ರೋಪಕರಣಗಳು, ಸಾವಯವ ಗೊಬ್ಬರ ಕೃಷಿಗೆ ಪೂರಕವಾದ ಸಲಕರಣೆ, ಔಷಧಿ ಇತ್ಯಾದಿಗಳ ವಿವರ ನೀಡಿದರು. ಕಂಪನಿ ಈಗಾಗಲೇ ಮೌಲ್ಯ ವರ್ಧಿಸಿ ಮಾರಾಟ ಮಾಡುತ್ತಿರುವ ಕೃಷಿ ಉತ್ಪನ್ನಗಳಾದ ಜೇನು, ತೆಂಗಿನ ಎಣ್ಣೆ, ಕಾಳು ಮೆಣಸು, ಏಲಕ್ಕಿ, ಕಾಫಿ ಇತ್ಯಾದಿಗಳ ಬಗ್ಗೆ ಮಾತನಾಡುತ್ತಾ, ಕರ್ನಾಟಕ ರಾಜ್ಯ ಮಟ್ಟದಲ್ಲಿ ನಮ್ಮ ಕಂಪನಿಗೆ ಮೌಲ್ಯ ವರ್ಧನೆಗಾಗಿ ಪ್ರಥಮ ಪ್ರಶಸ್ತಿ ಪಡೆದುದನ್ನು ತಿಳಿಸಿದರು.
ಎಸ್.ಎಲ್.ಎನ್. ಗ್ಲೋಬಲ್ ಅಗ್ರಿ ಸೊಲ್ಯೂಷನ್ಸ್ನ ಸಂಪನ್ಮೂಲ ವ್ಯಕ್ತಿ ವಿಷ್ಣುಮೂರ್ತಿ ಜಿ. ರಾವ್ ಕೆ. ಅವರು ಬೆಳೆಗಳ ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದ ಅತಿಥಿಗಳಾಗಿ ಬೇಕಲ್ ಸಿ. ಜಯರಾಮ ಗೌಡ, ಕೆ. ವೇಣುಗೋಪಾಲ ನಂಬಿಯಾರ್, ಕೆ.ಬಿ. ರಾಜೇಂದ್ರ, ಕೇರಳದ ಪಂಚಮಲ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಮೈಕಲ್ ಪೂವತ್ತಾನಿ, ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ನಿಯಮಿತ ಇದರ ನಿರ್ದೇಶಕರುಗಳಾದ ಹರ್ಷ ಡಿ.ಎನ್., ವಿಠಲ ಪಿ.ಸಿ., ದೇವರಾಜ್ ಬಿ.ಡಿ., ಪುಷ್ಪ ಬಿ.ಟಿ. ಹಾಜರಿದ್ದರು. ಕಂಪನಿಯ ನಿರ್ದೇಶಕರಾದ ಬಿನ್ನಿ ಡಿ.ಎಸ್., ಬೇಕಲ್ ಡಿ. ದೇವರಾಜ್ ಅತಿಥಿಗಳಿಗೆ ವಂದಿಸಿದರು.