ಮಡಿಕೇರಿ, ಜು. 27: ಪ್ರಸಕ್ತ 2019ನ್ನು ಕರ್ನಾಟಕ-ಸರ್ಕಾರವು “ಜಲ ವರ್ಷಾಚರಣೆ”ಯನ್ನಾಗಿ ಘೋಷಿಸಿರುವದರಿಂದ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕೆ-ಸ್ಟೆಪ್ಸ್, ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ “ಜಲಾಮೃತ” ಯೋಜನೆಯಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಿಶ್ಲೇಷಣಾತ್ಮಕ ಅಧ್ಯಯನ ವರದಿಯನ್ನು ಆಹ್ವಾನಿಸಲಾಗಿದೆ. ಸ್ಪರ್ಧೆಯಲ್ಲಿ ರಾಜ್ಯದ ಯಾವದೇ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದ್ದು, ತಮ್ಮ ಊರು, ನಗರದಲ್ಲಿ ಅಥವಾ ಸನಿಹದ ಹಳ್ಳಿ, ಸ್ಥಳೀಯ ಪ್ರಚಲಿತ ನೀರಿಗೆ ಸಂಬಂಧಪಟ್ಟ ಸಮಸ್ಯೆ ಕುರಿತಾಗಿ 4 ಪುಟಗಳಿಗೆ ಮೀರದಂತೆ ವಿಶ್ಲೇಷಣಾತ್ಮಕ ಅಧ್ಯಯನ ವರದಿ (ಸನಿಹದ ನದಿ, ಸರೋವರ, ಬಾವಿ, ಕೆರೆ ಅಥವಾ ಇನ್ಯಾವದೇ ಜಲ ಮೂಲಗಳಾಗಿರಬಹುದು)ಯೊಂದನ್ನು ಸಿದ್ಧಪಡಿಸಿ ಸಲ್ಲಿಸುವದು. ವರದಿಯಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದಲ್ಲಿ 2-3 ಛಾಯಾಚಿತ್ರಗಳನ್ನು ಲಗತ್ತಿಸಬಹುದು. ಸಮಸ್ಯೆಯನ್ನು ಸಮರ್ಪಕವಾಗಿ ಗುರುತಿಸಿ ಎಲ್ಲಾ ಕೋನಗಳಿಂದ ಅಧ್ಯಯನ ಮಾಡುವದಲ್ಲದೇ ಸಾಧ್ಯವಿರುವ ಪರಿಹಾರಾತ್ಮಕ ಸಲಹೆಗಳನ್ನು ತಮ್ಮ ವರದಿಯಲ್ಲಿ ಅಳವಡಿಸಿಕೊಳ್ಳುವದು.
ಈ ಸ್ಪರ್ಧೆಯ ಮುಖ್ಯ ಉದ್ದೇಶ ವಿದ್ಯಾರ್ಥಿಯಿಂದ ಸ್ಥಳೀಯವಾಗಿ ನೀರಿನ ಸಮಸ್ಯೆ ಕುರಿತು ವೈಜ್ಞಾನಿಕ ವಿವರಣೆ ಮತ್ತು ವೈಜ್ಞಾನಿಕ ತಳಹದಿಯಲ್ಲಿ ಪರಿಹಾರ ಹುಡುಕುವ ಪ್ರಯತ್ನವಾಗಿದೆ. ವಿದ್ಯಾರ್ಥಿಗಳು ಸಿದ್ಧಪಡಿಸಿದ ಯೋಜನೆಯನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿಗೆ ಇ-ಮೇಲ್ ಮೂಲಕ ಞಡಿvಠಿ.iಟಿಜಿo@gmಚಿiಟ.ಛಿom ಅಥವಾ ಅಂಚೆ ಮೂಲಕ ವಿಜ್ಞಾನ ಪರಿಷತ್ತಿನ ವಿಳಾಸ- ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ನಂ: 24/2, 21ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು ಇಲ್ಲಿಗೆ ಆಗಸ್ಟ್ 12 ರೊಳಗೆ ಕಳುಹಿಸಬಹುದು. ಮಾಹಿತಿಗೆ ದೂ.ಸಂ.080-26718939/ 9880917831/ 9483549159 ನ್ನು ಸಂಪರ್ಕಿಸಬಹುದು. ಪರಿಣಿತರ ತಂಡವು ಸ್ವಂತಿಕೆ, ವೈಜ್ಞಾನಿಕ ವಿಶ್ಲೇಷಣೆ ಮತ್ತು ಪರಿಹಾರ ಮಾರ್ಗೋಪಾಯಗಳನ್ನು ಪರಿಗಣಿಸಿ ಪ್ರತಿ ಜಿಲ್ಲೆಯಿಂದ ಅತ್ಯುತ್ತಮ 3 ಲೇಖನಗಳನ್ನು ಆಯ್ಕೆ ಮಾಡುತ್ತದೆ, ವಿಜೇತರನ್ನು ರಾಜ್ಯ ಮಟ್ಟದ ಕಾರ್ಯಾಗಾರಕ್ಕೆ ಆಹ್ವಾನಿಸಲಾಗುವದು ಎಂದು ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ್ ಕಡ್ಲೇವಾಡ ತಿಳಿಸಿದ್ದಾರೆ.