ಕುಶಾಲನಗರ, ಜು. 17: ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ಲಕ್ಷಾಂತರ ಮೌಲ್ಯದ ಮಾಲು ಸಹಿತ ಎರಡು ವಾಹನಗಳು ಮತ್ತು ಇಬ್ಬರು ಆರೋಪಿಗಳನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕುಶಾಲನಗರ-ಸಿದ್ದಾಪುರ ಮುಖ್ಯರಸ್ತೆಯ ಬಾಳೆಗುಂಡಿ ಬಳಿ ಮಾರುತಿ ಸುಜುಕಿ ವರ್ಸ (ಕೆಎ.12.ಎನ್.0594) ಕಾರಿನಲ್ಲಿ ಬೀಟೆ ಮರದ 6 ನಾಟಾಗಳನ್ನು ಸಾಗಾಟ ಮಾಡುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು 5 ಲಕ್ಷ ಮೌಲ್ಯದ ವಾಹನ ಮತ್ತು ಮಾಲನ್ನು ವಶಪಡಿಸಿಕೊಂಡಿದ್ದಾರೆ. ಅಂದಾಜು 60 ಸಿಎಫ್‍ಟಿ ಪ್ರಮಾಣದ ಮರದ ನಾಟಾಗಳನ್ನು ಕಾರಿನಲ್ಲಿ ತುಂಬಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಾಲ್ನೂರು ತ್ಯಾಗತ್ತೂರು ಗ್ರಾಮದ ಅಬ್ದುಲ್ ನಸೀರ್ (37), ಅಬ್ದುಲ್ ಮನಾಫ್ (30) ಎಂಬವರನ್ನು ಬಂಧಿಸಿದ್ದಾರೆ. ಇವರುಗಳು ವಾಲ್ನೂರು ತ್ಯಾಗತ್ತೂರು ಕಾಫಿ ತೋಟ ಮಾಲೀಕರಾದ ಸಿ.ಪಿ. ನಿಯಾಜ್ ಎಂಬವರ ತೋಟದಿಂದ ಕಳವು ಮಾಡಿ ಸಾಗಾಟ ಮಾಡಿರುವ ಬಗ್ಗೆ ತಿಳಿದುಬಂದಿದೆ. ಸರ್ವೆ ನಂ 150/7 ರ ತೋಟದಲ್ಲಿ ಬಿದ್ದಿದ್ದ ಬೀಟೆ ಮರಗಳನ್ನು ಸಾಗಿಸಲು ಮಾಲೀಕರು ಅನುಮತಿ ಕೋರಲು ಪತ್ರ ಬರೆದಿದ್ದು ಈ ನಡುವೆ ಆರೋಪಿಗಳು ಮರ ಕಳವು ಮಾಡಿದ್ದಾರೆ. ಮರ ಕಳವಾಗಿರುವ ಬಗ್ಗೆ ತೋಟದ ಮಾಲೀಕ ಸಿ.ಪಿ.ನಿಯಾಜ್ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಮಡಿಕೇರಿ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಉಪ ವಲಯ ಅರಣ್ಯಾಧಿಕಾರಿ ಕೆ.ಎಲ್.ವಿಲಾಸ್ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಅರಣ್ಯ ತನಿಖಾ ಠಾಣೆ ಸಮೀಪ ಮಾರುತಿ ಓಮ್ನಿ ಕಾರೊಂದನ್ನು ತಪಾಸಣೆಗೆ ತಡೆದು ನಿಲ್ಲಿಸಲು ಸೂಚಿಸಿದರೂ ಕಾರು (ಕೆಎ.12.ಎಂ.1372) ಸ್ಥಳದಿಂದ ಪರಾರಿಯಾಗಿತ್ತು. ಈ ಸಂದರ್ಭ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕಾರನ್ನು ಬೆನ್ನಟ್ಟಿದಾಗ ಬೈಲುಕೊಪ್ಪ ಬಳಿ ಕಾರು ಪತ್ತೆಯಾಗಿದೆ. ಕಾರನ್ನು ಪರಿಶೀಲಿಸಿದಾಗ ಬೀಟೆ ಮರದ 8 ನಾಟಾಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಮಾಲು ಮತ್ತು ವಾಹನದ ಮೌಲ್ಯ ಅಂದಾಜು ರೂ. 2 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಗಳು ತೆಲೆಮರೆಸಿ ಕೊಂಡಿದ್ದಾರೆ.

ಮಡಿಕೇರಿ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್, ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಐ.ವಿಲಾಸ್, ಎನ್.ಎಲ್.ಚೇತನ್, ಅರಣ್ಯ ರಕ್ಷಕರಾದ ಚರಣ್ ಕುಮಾರ್, ಸಚಿನ್, ಅರಣ್ಯ ವೀಕ್ಷಕರಾದ ಸಂತೋಷ್ ಹಾವನೂರು, ಬಿ.ಎಚ್.ಧರ್ಮಪಾಲ, ಟಿ.ಕೆ.ದಿನೇಶ್, ಮಂಜುನಾಥ್, ಮೇದಪ್ಪ, ಆಲ್ಬರ್ಟ್ ಡಿಸೋಜ, ವಾಹನ ಚಾಲಕರಾದ ಬಿ.ಆರ್. ಸತೀಶ್, ವಾಸು ಹಾಗೂ ನಾರಾಯಣ ರೈ ಪಾಲ್ಗೊಂಡಿದ್ದರು.