ವೀರಾಜಪೇಟೆ, ಜು. 3: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ಕ-ಪಕ್ಕದ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಕೃಷಿ ಭೂಮಿಗೆ ಲಗ್ಗೆಯಿಟ್ಟು ಫಸಲು, ತೋಟಗಳನ್ನು ಧ್ವಂಸಗೊಳಿಸುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಬೀಟಿಕಾಡು, ಬಾರಿಕ್ಕಾಡು ಪಾಲಂಗಾಲ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಇತ್ತಿಚೇಗೆ ಮನೆಯ ಪಕ್ಕದಲ್ಲಿರುವ ಕಾಫಿ ತೋಟಕ್ಕೆ ರಾತ್ರಿ ವೇಳೆ ಐದಾರು ಕಾಡಾನೆಗಳು ದಾಳಿ ನಡೆಸಿ ಕಾಫಿ ಗಿಡ ಮತ್ತು ಬಾಳೆ ಫಸಲು ಹಾಗೂ ಅಡಿಕೆ ಗಿಡಗಳನ್ನು ನಾಶ ಮಾಡಿದ್ದು ಅರಣ್ಯ ಇಲಾಖೆ ಕಾಡಾನೆಗಳನ್ನು ಕೂಡಲೇ ಕಾಡಿಗೆ ಅಟ್ಟುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮನೆಯ ಪಕ್ಕದಲ್ಲಿಯೇ ಬಂದ ಕಾಡಾನೆ ಫಸಲು ಬಿಟ್ಟಿದ್ದ ಬಾಳೆ ಹಾಗೂ ಕಾಫಿ ಗಿಡಗಳನ್ನು ನಾಶ ಮಾಡಿರುವದರಿಂದ ಇಲಾಖೆ ಪರಿಹಾರ ಒದಗಿಸಬೇಕು. ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ರಸ್ತೆಯಲ್ಲಿ ಓಡಾಡಲು ಭಯಬೀತರಾಗಿದ್ದು ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ, ಕಾಫಿ, ಹಲಸು, ಮಾವು, ಕರಿಮೆಣಸು ಬಳ್ಳಿಗಳನ್ನು ಧ್ವಂಸಗೊಳಿಸಿದೆ. ಈ ಬಾರಿ ಮಳೆ ಅಭಾವದಿಂದ ಈ ಭಾಗದ ರೈತರು ಕಂಗೆಟಿದ್ದರೆ, ನಿರಂತರವಾಗಿ ಕಾಡಾನೆಗಳು ಕಾಫಿ ತೋಟಗಳಲ್ಲಿ ಸಂಚರಿಸುವ ಮೂಲಕ ಬೆಳೆ ಮಣ್ಣುಪಾಲಾಗುತ್ತಿವೆ.

ಈ ಹಿಂದೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಸಂದರ್ಭ ಹಾಗೂ ವಿಹಾರಕ್ಕೆ ತೆರಳುವ ಸಂದರ್ಭ ಈ ಭಾಗದಲ್ಲಿ ವಾಹನದ ಮೇಲೆ ದಾಳಿ ಎಸಗಿರುವದು ಹಾಗೂ ಇತ್ತೀಚೆಗೆ ಬಿಟ್ಟಂಗಾಲದಲ್ಲಿ ಶಾಲಾ ವಿದ್ಯಾರ್ಥಿ ಮೇಲೆ ದಾಳಿ ಹಾಗೂ ಕಣ್ಣಂಗಾಲದಲ್ಲಿ ಮಹಿಳೆಯರ ಮೇಲೆ ದಾಳಿ ಮಾಡಿದ ಘಟನೆ ಜನಮಾನಸದಲ್ಲಿ ಇನ್ನೂ ಹಚ್ಚಹಸಿರಾಗಿಯೇ ಉಳಿದಿದೆ.

ಬೆಳೆ ನಷ್ಟ ಕುರಿತು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಯಾವದೇ ಪರಿಹಾರ ನೀಡಿಲ್ಲ, ಅಲ್ಲದೇ ಶಾಶ್ವತವಾಗಿ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಿಲ್ಲ. ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬೀಡು ಬಿಟ್ಟು ಗ್ರಾಮದ ರಸ್ತೆಯಲ್ಲಿ ಯಾವ ಭಯವಿಲ್ಲದೆ ಮುಕ್ತವಾಗಿ ಓಡಾಡುತ್ತದೆ. ಇದರಿಂದ ತೋಟದ ಕಾರ್ಮಿಕರು ಕೆಲಸಕ್ಕೆ ಬರಲು ಹೆದರುತ್ತಾರೆ. ಸ್ವತಃ ಕೆಲಸ ಮಾಡಲು ಕೂಡ ತೋಟಕ್ಕೆ ಹೋಗಲು ಸಾದ್ಯವಾಗದ ಪರಿಸ್ಥಿತಿ ಎದುರಾಗಿದೆ. ಕಾಫಿ ತೋಟ ಕಾಡಾನೆಗಳ ಪುಂಡಾಟಕ್ಕೆ ಬಲಿಯಾಗಿ ಬರಿದಾಗುತ್ತಿದೆ,

ಆನೆ ಓಡಿಸಲು ಬರುವವರು 4-5 ಪಿಟಾಕಿ, ಐದಾರು ತೋಟ ಹಾಗೂ ಒಂದು ಬಂದೂಕಿನೊಂದಿಗೆ ಕೇವಲ ಮೂರು ನಾಲ್ಕು ಜನ ಬರುತ್ತಾರೆ. ಇದರಿಂದ 4 ಗ್ರಾಮದಲ್ಲಿರುವ ಆನೆಯನ್ನು ಓಡಿಸಲು ಸಾಧ್ಯವೇ ಎಂದು ಗ್ರಾಮಸ್ತರು ಪ್ರಶ್ನಿಸುತ್ತಾರೆ.

ಅರಣ್ಯದಲ್ಲಿ ಮೇವಿನ ಕೊರತೆಯಿಂದಾಗಿ ಹೊರದಾಟುವ ಆನೆಗಳು ಕೆದಮುಳ್ಳ್ಳೂರು ಪಾಲಂಗಾಲ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಲೂಟಿ ಮಾಡುವದು ನಿತ್ಯದ ಹಾವಳಿಯಾಗಿದೆ. ಇಂದು ಕೊಡಗಿನ ರೈತರನ್ನು ಕಾಡುತ್ತಿರುವ ಮೊದಲ ಸಮಸ್ಯೆ ಕಾಡಾನೆಯ ನಿರಂತರ ದಾಳಿ. ಈ ಹಾವಳಿಗಳಿಗೆ ಸರಕಾರಗಳ ದೋರಣೆಗಳೇ ಕಾರಣ. ಸರಕಾರದ ಒಡೆತನದಲ್ಲಿರುವ ಕಾಡಿನಲ್ಲಿ ಆನೆಗಳನ್ನೊಳಗೊಂಡಂತೆ ಇತರ ಪ್ರಾಣಿಗಳಿಗೆ ಅಗತ್ಯವಾದ ನೈಸರ್ಗಿಕ ಮರಗಳನ್ನು ಬೆಳೆಯುವದಕ್ಕೆ ಬದಲಾಗಿ ಕಾಡನ್ನು ಲಾಭ ತರುವ ಪ್ರದೇಶವಾಗಿ ಪರಿಗಣಿಸಿ ತೇಗದ ಮರಗಳನ್ನೇ ಸರಕಾರ ನೆಟ್ಟಿದೆ. ಕೆರೆಗಳ ಹೂಳೆತ್ತಲಿಲ್ಲ. ಕಾಡಿನ ಅಭಿವೃದ್ಧಿಗೆಂದು ರೂಪಗೊಂಡ ಯೋೀಜನೆಗಳು ಪುಸ್ತಕದಲ್ಲೇ ಉಳಿದುವು ಅಥವಾ ಸಮರ್ಪಕವಾಗಿ ಅನುಷ್ಠಾನಕ್ಕೆ ಬರಲಿಲ್ಲ. ತನ್ನ ದೋರಣೆಗಳನ್ನು ಬದಲಾಯಿಸಿ ಜನರ, ಕೃಷಿಯ ರಕ್ಷಣೆ ನಡೆಸುವದರ ಬದಲು ಸತ್ತನಂತರ ಹೆಚ್ಚು ಪರಿಹಾರ ಕೊಡುವದರಲ್ಲೆ ತನ್ನ ಸಾಧನೆ ಅಡಗಿದೆ ಎಂದು ಸರಕಾರ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ನಿರಂತರ ಆನೆ ಧಾಳಿಯಿಂದ ಕ್ರೋಧಗೊಂಡಿರುವ ನಾಡಿನ ಜನತೆಯ ಕಣ್ಣಿಗೆ ಮಣ್ಣೆರೆಚಲು ಸರಕಾರ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯ ನಾಟಕ ಆಡಿಸಿ ಆ ಬಗ್ಗೆ ಪ್ರಚಾರ ಮಾಡುತ್ತಿದೆ ಎಂದು ಕೃಷಿಕರು ಹೇಳುತ್ತಾರೆ.

ನೆಪ ಮಾತ್ರಕ್ಕೆ ಭೇಟಿ: ಆನೆಗಳು ರಾತ್ರಿ ವೇಳೆ ಗ್ರಾಮಗಳತ್ತ ಬರದಂತೆ ತಡೆಯದ ಅರಣ್ಯ ಅಧಿಕಾರಿಗಳು, ದಾಳಿ ಮಾಡಿ ಬೆಳೆ ನಷ್ಟ ಮಾಡಿದ ಮೇಲೆ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಅರ್ಜಿ ನೀಡಿ ಪರಿಹಾರ ಕೊಡುತ್ತೇವೆ ಎಂಬ ಉತ್ತರ ನೀಡುತ್ತಾರೆ. ಆದರೆ ಅವುಗಳನ್ನು ಕಾಡಿಗಟ್ಟುವ ಕೆಲಸ ಮಾತ್ರ ಆಗುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಾದ್ಯಂತ ನೂರಾರು ಕೃಷಿಕರಿಗೆ ಕಳೆದ ವರ್ಷದ ಪರಿಹಾರ ನೀಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಬೆಳೆ ಕಳೆದುಕೊಂಡ ಕೃಷಿಕರಿಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡಬೇಕು ಎಂದು ಕೃಷಿಕರು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೆದಮುಳ್ಳೂರು ವ್ಯಾಪ್ತಿಯಲ್ಲಿ ನಿತ್ಯ ಕಾಡಾನೆ ದಾಂದಲೆ ನಡೆಸುತ್ತಿರುವದು ಗಮನಕ್ಕೆ ಬಂದಿದೆ. ಇಲಾಖೆ ಈ ಬಗ್ಗೆ ಕ್ರಮ ತೆಗೆದುಕೊಂಡು ಇಲಾಖೆಯ ಮುಖಾಂತರ ಭಾನುವಾರ ಬೆಳಗ್ಗಿನಿಂದಲೇ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಅಲ್ಲಿನ ನಿವಾಸಿಗಳನ್ನು ಸೇರಿಸಿ ಕೊಂಡು ಮಾಡುವ ಸಂದರ್ಭ ಆನೆಗಳು ನಮ್ಮ ಮೇಲೆ ದಾಳಿ ಮಾಡಲು ಮುಂದಾಗಿದ್ದರಿಂದ ಕಾರ್ಯಾಚರಣೆ ಸಾಧ್ಯವಾಗಿಲ್ಲ. ಇಲ್ಲಿನ ಖಾಸಗಿ ಜಾಗಗಳಲ್ಲಿ ವಾಟೆ ಕಾಡು ಹೆಚ್ಚಾಗಿರುವದರಿಂದ ಆನೆಗಳು ಅಲ್ಲಿಯೇ ಬೀಡು ಬಿಟ್ಟು ಮರಿ ಹಾಕಿದ್ದು ಮರಿಗಳು ಇದೀಗ ಚಲಿಸ ತೊಡಗಿವೆ. ಇನ್ನೆರಡು ದಿನಗಳಲ್ಲಿ ಅವುಗಳನ್ನು ಮತ್ತೆ ಕಾಡಿಗಟ್ಟುವ ಕಾರ್ಯಾಚರಣೆ ಮಾಡಲಿದ್ದೇವೆ. ಸಾರ್ವಜನಿಕರು ಸಹಕರಿಸಬೇಕು ಎಂದು ವಲಂiÀi ಅರಣ್ಯಾಧಿಕಾರಿ ಗಳಾದ ಕಂಬೆಯಂಡ ಗೋಪಾಲ್ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. - ರಜಿತ ಕಾರ್ಯಪ್ಪ