ಮಡಿಕೇರಿ, ಜೂ.28 : ಕಳೆದ ಸಾಲಿನ ಪ್ರಾಕೃತಿಕ ವಿಕೋಪದ ಸಂದರ್ಭ ಸಂತ್ರಸ್ತರಾದ ಕಾಲೂರು ಗ್ರಾಮದ ಸುಮಾರು 20 ವಿದ್ಯಾರ್ಥಿಗಳಿಗೆ ಸಿಡ್ನಿಯ ಮಲೆಯಾಳಿ ಸಂಘದ ವತಿಯಿಂದ ತಲಾ 3 ಸಾವಿರ ರೂ.ಗಳಂತೆ 60ಸಾವಿರ ರೂ.ಗಳ ಆರ್ಥಿಕ ನೆರವನ್ನು ವಿತರಿಸಲಾಯಿತು.
ಮೂಲತಃ ಕೊಡಗಿನವರಾಗಿದ್ದು, ಆಸ್ಟ್ರೇಲಿಯಾದಲ್ಲಿ ಇಂಜಿನಿಯರ್ ಆಗಿರುವ ಐಮಂಡ ಜಗದೀಶ್ ಅವರು ನಗರದ ಪತ್ರಿಕಾಭವನದಲ್ಲಿ ಸಂತ್ರಸ್ತ ವಿದ್ಯಾರ್ಥಿಗಳಿಗೆ ನೆರವಿನ ಚೆಕ್ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಜಗದೀಶ್ ಅವರು, ಕಳೆದ ಸಾಲಿನ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದ ಹಲವು ಕುಟುಂಬಗಳಿಗೆ ತಾನು ವೈಯಕ್ತಿಕವಾಗಿ ಸುಮಾರು 2 ಲಕ್ಷ ರೂ.ಗಳ ನೆರವನ್ನು ನೀಡಿದ್ದು, ಇದೀಗ ಸಿಡ್ನಿಯ ಕೊಡವ ಕೂಟ ಹಾಗೂ ಮಲೆಯಾಳಿ ಸಂಘಗಳು ನೀಡಿರುವ ನೆರವನ್ನು ವಿತರಿಸುತ್ತಿರುವದಾಗಿ ತಿಳಿಸಿದರು.
ಸಿಡ್ನಿಯ ಕೊಡವ ಕೂಟದ ವತಿಯಿಂದ ಮಕ್ಕಂದೂರು ಸರಕಾರಿ ಪ್ರೌಢಶಾಲೆಯ 53 ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸ್ವೆಟರ್, ಟೈ ಮತ್ತು ಪಾದರಕ್ಷೆಗಳನ್ನು ಗುರುವಾರ ವಿತರಿಸಲಾಗಿದ್ದು, ಇದೀಗ ಸಿಡ್ನಿಯ ಮಲೆಯಾಳಿ ಸಂಘದವರು ಸಂಗ್ರಹಿಸಿ ನೀಡಿರುವ 60 ಸಾವಿರ ರೂ.ಗಳನ್ನು ಕಾಲೂರು ಗ್ರಾಮದ ಸಂತ್ರಸ್ತ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ತಲಾ 3 ಸಾವಿರ ರೂ.ಗಳಂತೆ ವಿತರಿ ಸುತ್ತಿರುವದಾಗಿ ಹೇಳಿದರು.
ಈ ಅಲ್ಪ ನೆರವಿನಿಂದ ಸಂತ್ರಸ್ತರ ಎಲ್ಲ ಸಂಕಷ್ಟಗಳು ಪರಿಹಾರ ವಾಗುವದಿಲ್ಲ. ಆದರೆ ವಿದೇಶ ದಲ್ಲಿದ್ದರೂ, ನಿಮ್ಮ ನೋವಿಗೆ ನಾವು ಸ್ಪಂದಿಸುತ್ತೇವೆ ಎಂಬ ಭರವಸೆಯನ್ನು ಸಂತ್ರಸ್ತ ಕುಟುಂಬಗಳಲ್ಲಿ ಮೂಡಿಸುವದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕಳೆದ ಆರು ತಿಂಗಳ ಹಿಂದೆ ತಾನು ಕೊಡಗಿಗೆ ಆಗಮಿಸಿದ ಸಂದರ್ಭ ವೈಯಕ್ತಿಕವಾಗಿ ಕೆಲವು ಸಂತ್ರಸ್ತ ಕುಟುಂಬಗಳಿಗೆ ಹಣಕಾಸಿನ ನೆರವು ನೀಡಿದ್ದು, ಬಳಿಕ ಸಿಡ್ನಿಯಲ್ಲಿರುವ ಕೊಡವ ಕೂಟ ಹಾಗೂ ಮಲೆಯಾಳಿ ಸಂಘದವರು ಕೂಡಾ ಆಯಾ ಸಂಘಟನೆಗಳ ಸದಸ್ಯರಿಂದ ಹಣವನ್ನು ಸಂಗ್ರಹಿಸಿ ನೀಡಿದ್ದರು. ಇದು ನೈಜ ಸಂತ್ರಸ್ತರಿಗೆ ತಲಪಬೇಕು ಎಂಬ ಉದ್ದೇಶದಿಂದ ಪತ್ರಕರ್ತ ಐಮಂಡ ಗೋಪಾಲ್ ಹಾಗೂ ಕಾಲೂರಿನ ಸಮಾಜಸೇವಕ ನಾಗೇಶ್ ಕಾಲೂರು ಅವರ ಮೂಲಕ ಕಾರ್ಯಕ್ರಮ ರೂಪಿಸಿ ನೆರವು ಹಸ್ತಾಂತರಿಸುತ್ತಿರುವದಾಗಿ ಹೇಳಿದರು.
ಸಾಹಿತಿ ಹಾಗೂ ಕಾಲೂರಿನ ಸಮಾಜಸೇವಕ ನಾಗೇಶ್ ಕಾಲೂರು ಅವರು ಮಾತನಾಡಿ ದೇಶ ವಿದೇಶಗಳ ದಾನಿಗಳ ನೆರವಿನಿಂದ ಇಂದು ಕಾಲೂರಿನ ಸಂತ್ರಸ್ತ ಕುಟುಂಬಗಳು ಒಂದಷ್ಟು ನೆಮ್ಮದಿಯನ್ನು ಕಾಣು ವಂತಾಗಿದೆ. ಪರರಿಗಾಗಿ ಸ್ಪಂದಿಸುವ ಗುಣ ಐಮಂಡ ಜಗದೀಶ್ ಅವರಲ್ಲಿರುವದನ್ನು ಅವರ ‘ಬೆಳಕಿನ ಕಿರಣ’ ಕೃತಿಯಲ್ಲಿ ಗಮನಿಸಿದ್ದೆ. ಅದರಂತೆ ಅವರು ಇಂದು ಸಂತ್ರಸ್ತರಿಗಾಗಿ ಮಿಡಿದಿದ್ದು, ನೆರವು ನೀಡಿದ ಕೊಡವ ಕೂಟ ಹಾಗೂ ಮಲೆಯಾಳಿ ಸಂಘದವರಿಗೆ ಸಂತ್ರಸ್ತರ ಪರವಾಗಿ ಕೃತಜ್ಞತೆ ಸಲ್ಲಿಸುವದಾಗಿ ತಿಳಿಸಿದರು. ಈ ಸಂದರ್ಭ ಪತ್ರಕರ್ತ ಐಮಂಡ ಗೋಪಾಲ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಇಟ್ಟಿಗೆ ವಿತರಣೆ
ಚೆಟ್ಟಳ್ಳಿ: ಬೆಂಗಳೂರಿನ ಐ ಕೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಡಿಕೇರಿ ತಾಲೂಕಿನ ಕೊಟ್ಟಮುಡಿ ನಿವಾಸಿಯಾದ ಆಮಿನ ಎಂಬವರಿಗೆ ಮನೆ ನಿರ್ಮಿಸಲು ಒಂದು ಲಾರಿ ಇಟ್ಟಿಗೆಯನ್ನು ವಿತರಿಸಲಾಯಿತು. ಈ ಸಂದರ್ಭ ಐಕೇರ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಮುಹ್ಸಿನ್ ಕಮಾಲ್, ಯೂನುಸ್, ಸದಸ್ಯ ಆಬಿದ್ ಇದ್ದರು.