ಮಡಿಕೇರಿ, ಜೂ. 19: ‘ಆರೋಗ್ಯಂ ಸರ್ವತ್ರ ಸಾಧನಂ’ ಎಂಬಂತೆ ಮನುಕುಲದಲ್ಲಿ ಹುಟ್ಟಿದವರು ಮಾತ್ರವಲ್ಲದೆ, ಜೀವಸಂಕುಲದ ಎಲ್ಲವೂ ಕೂಡ ಆರೋಗ್ಯದಿಂದ ಇದ್ದಲ್ಲಿ ಮಾತ್ರ ಏನಾದರೂ ಸಾಧಿಸಲು ಸಾಧ್ಯ’ ಎಂಬ ನುಡಿಯಿದೆ. ಅದಕ್ಕೆ ನೈಜ ಅರ್ಥವನ್ನು ತಂದುಕೊಡುವಲ್ಲಿ ಯೋಗ ಅತ್ಯಂತ ಮಹತ್ವದ್ದಾಗಿದೆ.
ಆ ನೈಜ್ಯತೆಯ ಅರಿವಿನಿಂದಾಗಿ ಕಳೆದ ಐದು ವರ್ಷಗಳಿಂದ ಜೂನ್ 21ರ ದಿನವನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಇಂತಹ ಯೋಗಕ್ಕೆ ಸಾಕ್ಷಾತ್ ಪರಶಿವನೇ ಮೊದಲು ಗುರುವೆಂದು ಪುರಾಣೋಕ್ತ ಉಲ್ಲೇಖವಿದೆ. ಶ್ರೀಮನ್ನಾರಾಯಣ ತನ್ನ ಯೋಗ ನಿದ್ದೆಯೊಂದಿಗೆ ಕ್ಷೀರ ಸಾಗರದಲ್ಲಿ ಪವಡಿಸು (ಸುಖ ನಿದ್ದೆ) ಮಾಡುತ್ತಿದ್ದ ಮಹತ್ವವಿದೆ. ಭಾರತದ ಖುಷಿ ಪರಂಪರೆ ಈ ಯೋಗದಿಂದಲೇ ಸಿದ್ಧಿ ಕಂಡುಕೊಂಡು ಜಗತ್ತಿಗೆ ಮಾರ್ಗದರ್ಶಕರಾಗಿದ್ದರು ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿ ಸಲಾಗಿದೆ. ಸಾಕ್ಷಾತ್ ಭಗವಾನ್ ಶ್ರೀಕೃಷ್ಣ ಯೋಗ ಮಾರ್ಗವನ್ನು ಭಗವದ್ಗೀತೆ ಮೂಲಕ ಜಗತ್ತಿಗೆ ಸಾರಿ ಹೇಳಿದಿದೆ.
ಹೀಗೆ ಭರತ ಭೂಮಿಯಲ್ಲಿ ಎಲ್ಲ ಕಾಲಕ್ಕೂ ಯೋಗಮಾರ್ಗದಿಂದ ಸಿದ್ಧಿ ಪಡೆದು ಮನುಕುಲದ ಏಳಿಗೆ ನಡೆದು ಬಂದಿರುವ ಇತಿಹಾಸವನ್ನು ಗಮನಿಸುತ್ತಾ ಬರಬಹುದು. ಪತಂಜಲಿ ಮಹರ್ಷಿಗಳು ಸರ್ವತ್ರಗೊಳಿಸಿದ ಯೋಗ ಮಾರ್ಗದಿಂದ ‘ನಾ ದೈನ್ಯೇನ ಜೀವನಂ’ ಎಂಬಂತೆ ಬದುಕಿನಲ್ಲಿ ಎಂದಿಗೂ ಅಸಹಾಯಕತೆಯಿಂದ ಬಳಲದೆ, ದೃಢಕಾಯರಾಗಿ ನೂರ್ಕಾಲ ಬಾಳುವದಕ್ಕೆ ಅರ್ಥ ಕಲ್ಪಿಸಿದ್ದೇ ಈ ಯೋಗ ಪದ್ಧತಿ.
ವಿಶ್ವ ಯೋಗ ದಿನ: ನಾಳೆ 5ನೇ ವರ್ಷದ ಅಂತರ್ರಾಷ್ಟ್ರೀಯ ಯೋಗ ದಿನ. ಯೋಗವು ಭಾರತೀಯ ಮೂಲದ, 6000ಕ್ಕಿಂತಲೂ ಹಳೆಯದಾದ, ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ತಾ. 21 ರಂದು ವಿಶ್ವ ಯೋಗ ದಿನಾಚರಣೆಯನ್ನು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಇದು ಭಾರತದ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಯೋಗದ ಇತಿಹಾಸ ಕ್ರಿ.ಪೂ. 3ನೇ ಶತಮಾನದಲ್ಲಿದ್ದ ಪತಂಜಲಿ ಋಷಿಯ ಚಿಂತನೆಯ ಫಲವಾಗಿದೆಯಲ್ಲದೆ ಯುಗಯುಗಗಳಿಂದ ಬೆಳೆದು ಬಂದಿದೆ.
ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ. ವಿಶ್ವ ಯೋಗ ದಿನದ ವಿಶೇಷತೆ, ಯೋಗದ ಮಹತ್ವ, ಯೋಗ ವ್ಯಾಯಾಮ ಮಾತ್ರವಲ್ಲದೆ ಈ ಜಗತ್ತು ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹವಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗ ಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ; ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ.
ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುವ ವಿಶೇಷ ಕಲೆಯಾಗಿದೆ. ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದವು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು. 2015, ಜೂನ್ 21ನೇ ತಾರೀಕಿನಂದು ಮೊದಲ ಅಂತರ್ರಾಷ್ಟ್ರೀಯ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು.
ಜೂ. 21 ದೀರ್ಘಕಾಲ ಹಗಲು ಹೊಂದಿರುವ ದಿನ. ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಈ ದಿನವನ್ನು ಬೇಸಿಗೆಯ ಉತ್ತರಾಯಣ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಈ ದಿನವನ್ನು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ. ದಕ್ಷಿಣಾನವನ್ನು ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ.
ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಧೀ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಿದೆ ಎಂಬ ನಂಬಿಕೆಯಿದೆ. ಬೇಸಿಗೆ ಅಯನ ಸಂಕ್ರಾಂತಿಯ ಬಳಿಕ ಮೊದಲ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಇವೆಲ್ಲದರ ಹೊರತಾಗಿ ಶಿವ ಈ ದಿನದಂದು ಉಳಿದ ಮಾನವ ಜನಾಂಗಕ್ಕೆ ಯೋಗದ ಜ್ಞಾನವನ್ನು ನೀಡಲು ಪ್ರಾರಂಭಿಸದನೆಂದು ನಂಬಿಕೆಯಿದೆ. ಶಿವ ಯೋಗದ ಆದಿ ಗುರು ಆದ ದಿನವೂ ಕೂಡ ಹೌದು.
ಯೋಗ ದಿನದ ಬಗ್ಗೆ ಪ್ರಧಾನಿ ಮೋದಿ ಮಾತು
ಅಂತರ್ರಾಷ್ಟ್ರೀಯ ಯೋಗ ದಿನ ಆಚರಣೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಬಹಳಷ್ಟಿದೆ. ಮೊದಲ ಅಂತರ್ರಾಷ್ಟ್ರೀಯ ಯೋಗ ದಿನದಂದು ಮಾತನಾಡಿದ್ದ ಮೋದಿ ಅವರು ‘ಆಧುನಿಕ ಜೀವನಶೈಲಿಯ ಸಮಸ್ಯೆಗಳು ನಮಗೆಲ್ಲರಿಗೂ ತಿಳಿದಿದೆ. ಜನರು ಒತ್ತಡ ಸಂಬಂಧಿ ಕಾಯಿಲೆ ಯಿಂದ ಬಳಲುತ್ತಿದ್ದಾರೆ. ಮಧುಮೇಹ ಹಾಗೂ ರಕ್ತದೊತ್ತಡದಂತಹ ಜೀವನಶೈಲಿ ಸಂಬಂಧಿತ ರೋಗ ದಿಂದ ಬಳಲುತ್ತಿದ್ದಾರೆ. ಸಂವಹನ ರೋಗಗಳನ್ನು ನಿಯಂತ್ರಿಸಲು ನಾವು ವಿಧಾನಗಳನ್ನು ಹುಡುಕ್ಕಿದ್ದೇವೆ. ಆದರೆ ಸಂವಹನ ಮಾಡದ ರೋಗಗಳಿಗೆ ಹೊರೆ ವರ್ಗಾಯಿಸಿಕೊಂಡಿದೆ. ಶಾಂತಿಯಿಲ್ಲದೆ ನರಳಾಡುತ್ತಿರುವ ಇಂದಿನ ಯುವ ಜನಾಂಗ ಔಷಧಿಗಳಲ್ಲಿ ಆಶ್ರಯ ಪಡೆಯುತ್ತಾರೆ. ಯೋಗವನ್ನು ಅಭ್ಯಾಸ ಮಾಡುವದರ ಮೂಲಕ ಒತ್ತಡ ಹಾಗೂ ಬಹುಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದಾಗಿದೆ ಎಂಬದಕ್ಕೆ ಪುರಾವಣೆಗಳಿವೆ’ ಎಂದಿದ್ದರು.
ಸರ್ವತ್ರ ಆಚರಣೆ: ಪ್ರಸಕ್ತ ವಿಶ್ವಯೋಗದಿನವನ್ನು ಜಗತ್ತಿನ ವಿವಿಧ ರಾಷ್ಟ್ರಗಳೊಂದಿಗೆ, ನಮ್ಮ ದೇಶದಲ್ಲಿ ಹಳ್ಳಿಯಿಂದ ದಿಲ್ಲಿಯ ತನಕ ಜಾರಿಗೊಳಿಸಲಾಗಿದೆ. ಸ್ವತಃ ಕೇಂದ್ರ ಸರಕಾರವೇ ಯೋಗ ಆಚರಣೆಯಲ್ಲಿ ತೊಡಗಿಸಿಕೊಂಡು ಭಾರತೀಯ ಆಯುಷ್ ಮಂತ್ರಾಲಯ ಮುಖಾಂತರ ಸರ್ವತ್ರ ಆಚರಣೆಗೆ ಒತ್ತು ನೀಡಿದೆ. ಪರಿಣಾಮ ಈ ಇಲಾಖೆಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ವಿವಿಧ ಇಲಾಖೆಗಳು, ಯೋಗಪಟುಗಳ ಸಹಕಾರದಿಂದ ತಾ. 21 (ನಾಳೆ) ಇಲ್ಲಿನ ಪೊಲೀಸ್ ಮೈತ್ರಿ ಭವನದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 6.30ಕ್ಕೆ ಮೈತ್ರಿ ಭವನದಲ್ಲಿ ಸಂಪನ್ನಗೊಂಡು ಸತತ ಒಂದು ಗಂಟೆ ಯೋಗ ಪ್ರದರ್ಶನ ನಡೆಯಲಿದೆ.
ಮಾತ್ರವಲ್ಲದೆ ಎಲ್ಲ ತಾಲೂಕು ಕೇಂದ್ರಗಳು, ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳಲ್ಲಿ ಸಾಮೂಹಿಕ ಯೋಗ ಆಚರಣೆಗೆ ತಯಾರಿ ನಡೆದಿದೆ. ಆ ದಿಸೆಯಲ್ಲಿ ಜಿಲ್ಲಾಡಳಿತ ದೊಂದಿಗೆ ಆಯುಷ್ ಮಂತ್ರಾಲಯ, ಪೊಲೀಸ್ ಇಲಾಖೆ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು
ಕೈಜೋಡಿಸಿದ್ದು, ವ್ಯಾಪಕ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಆಯುಷ್ ಅಧಿಕಾರಿ ಡಾ. ರಾಮಚಂದ್ರ ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ.
ಕೊಡಗು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಪೂರ್ವಭಾವಿ ಸಭೆ ನಡೆಸಿ, ತಾ. 21 ರಂದು ಜಿಲ್ಲಾ ಕೇಂದ್ರ, ಎಲ್ಲ ತಾಲೂಕು ಕೇಂದ್ರಗಳು, ಶಾಲಾ-ಕಾಲೇಜುಗಳಲ್ಲಿ ಯೋಗವನ್ನು ಆಯೋಜಿಸಿ ಸಂಬಂಧಿಸಿದ ವರದಿಗಳನ್ನು ಛಾಯಾಚಿತ್ರಗಳ ಸಹಿತ ಕಳುಹಿಸಿಕೊಡಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.