ಶನಿವಾರಸಂತೆ, ಜೂ. 15: ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಟಿ.ವಿ. ಹಾಗೂ ಗ್ಯಾಸ್ ಸಿಲಿಂಡರ್ ಕಳವು ಮಾಡಿರುವ ಘಟನೆ ಸಮೀಪದ ನಂದಿಗುಂದ ಗ್ರಾಮದ ಕಾಫಿ ತೋಟದ ಮನೆಯಲ್ಲಿ ನಡೆದಿದೆ.

ಬೆಂಗಳೂರಿನ ಬೆಳ್ಳಿಗೌಡ ಅವರಿಗೆ ಸೇರಿದ ನಂದಿಗುಂದ ಗ್ರಾಮದ ತೋಟ ಹಾಗೂ ಮನೆಯ ಉಸ್ತುವಾರಿಯನ್ನು ಅವರ ಸಹೋದರ ಚಿನ್ನಳ್ಳಿ ಗ್ರಾಮದ ಕೆ.ಟಿ. ಲಕ್ಷ್ಮೇಗೌಡ ನೋಡಿಕೊಳ್ಳುತ್ತಿದ್ದರು. ಕಾವಲಿಗೆ ನೇಮಿಸಿದ್ದ ಹಿತ್ತಲಕೇರಿ ಗ್ರಾಮದ ಸಣ್ಣಪ್ಪ ತೋಟದ ಮನೆಯ ಬಾಗಿಲು ತೆರೆದಿರುವ ಬಗ್ಗೆ ಲಕ್ಷ್ಮೇಗೌಡರಿಗೆ ದೂರವಾಣಿ ಮೂಲಕ ತಿಳಿಸಿದರು. ಲಕ್ಷ್ಮೇಗೌಡರು ಬಂದು ನೋಡಿದಾಗ ಬಾಗಿಲ ಬೀಗವನ್ನು ರಾಡಿನಿಂದ ಮುರಿದಿದ್ದು, ಒಳಗಿದ್ದ ರೂ. 20 ಸಾವಿರ ಮೌಲ್ಯದ ಟಿ.ವಿ. ಹಾಗೂ ಸಿಲಿಂಡರ್ ಕಳುವಾಗಿರುವದು ಕಂಡುಬಂದಿತು. ಲಕ್ಷ್ಮೇಗೌಡರು ನೀಡಿದ ದೂರಿನ ಅನ್ವಯ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಎಸ್.ಐ. ಎಚ್.ಎಂ. ಮರಿಸ್ವಾಮಿ ಪ್ರಕರಣ ದಾಖಲಿಸಿದ್ದಾರೆ.