ಸೋಮವಾರಪೇಟೆ, ಜೂ. 11: ಕಳೆದ ಅನೇಕ ದಶಕಗಳಿಂದ ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಲೋಕೋಪಯೋಗಿ ಇಲಾಖೆಯ ಕಚೇರಿ ಇದೀಗ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.

ರೂ. 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಕಟ್ಟಡದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಕಾರ್ಯಾರಂಭ ಮಾಡಿದ್ದು, ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಿದೆ.

ಲೋಕೋಪಯೋಗಿ ಇಲಾಖೆ ಯ 42.09 ಯೋಜನೆಯಡಿ ಮೀಸಲಿರಿಸಿದ್ದ ರೂ. 1 ಕೋಟಿ ಅನುದಾನದಡಿ ಗುತ್ತಿಗೆದಾರ ಶ್ರೀನಿವಾಸ್ ಅವರು ನೂತನ ಕಟ್ಟಡ ನಿರ್ಮಿಸಿದ್ದು, ಇದರಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ, ಈರ್ವರು ಸಹಾಯಕ ಅಭಿಯಂತರರ ಕಚೇರಿ, ಮೂವರು ಕಿರಿಯ ಅಭಿಯಂತರರ ಕಚೇರಿ, ಸಿಬ್ಬಂದಿಗಳಿಗೆ 2 ಕೊಠಡಿ, ಸಭಾಂಗಣ, ದಾಸ್ತಾನು ಕೊಠಡಿ, ನಿರೀಕ್ಷಣ ಕೊಠಡಿ, ಕಚೇರಿಗೆ ಆಗಮಿಸುವ ಸಾರ್ವಜನಿಕರು ಮತ್ತು ಕಚೇರಿ ಸಿಬ್ಬಂದಿಗಳಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಇದರೊಂದಿಗೆ ಒಳ ಭಾಗದಲ್ಲಿ ಸುಸಜ್ಜಿತ ಪೀಠೋಪಕರಣ, ಪ್ರತ್ಯೇಕ ಕ್ಯಾಬಿನ್‍ಗಳನ್ನು ನಿರ್ಮಿಸಲಾಗಿದ್ದು, ಈಗಾಗಲೇ ಸಾರ್ವಜನಿಕ ಕೆಲಸ ಕಾರ್ಯಗಳು ನಡೆಯುತ್ತಿವೆ. ಈ ಹಿಂದೆ ಇದ್ದ ಲೋಕೋಪಯೋಗಿ ಇಲಾಖೆಯ ಹಳೆಯ ಕಚೇರಿಯನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರ ನಿವಾಸವನ್ನಾಗಿ ಪರಿವರ್ತಿಸಲಾಗಿದೆ.

ಫ್ರೆಬ್ರವರಿ ತಿಂಗಳಿನಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು, ಬಸವನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭವೇ ಅಧಿಕೃತವಾಗಿ ಕಚೇರಿಯನ್ನು ಉದ್ಘಾಟಿಸಿದ್ದು, ಇದೀಗ ನೂತನ ಕಚೇರಿಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಸಾರ್ವಜನಿಕರು ತಮ್ಮ ಕೆಲಸಗಳಿಗೆ ನೂತನ ಕಚೇರಿಯನ್ನು ಸಂಪರ್ಕಿಸ ಬಹುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ತಿಳಿಸಿದ್ದಾರೆ.