ಸೋಮವಾರಪೇಟೆ, ಜೂ. 11: ಪಟ್ಟಣದ ಕಕ್ಕೆಹೊಳೆ ಜಂಕ್ಷನ್‍ನಿಂದ ವಿವೇಕಾನಂದ ವೃತ್ತದ ವರೆಗಿನ ರಸ್ತೆಯನ್ನು ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಅವರು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಕಕ್ಕೆಹೊಳೆ ಸೇತುವೆಯಿಂದ ವಿವೇಕಾನಂದ ವೃತ್ತದವರೆಗೆ ಪ್ರತಿ ದಿನ ವಾಹನ ದಟ್ಟಣೆ ಅಧಿಕವಿದ್ದು, ಶಾಲಾ ಕಾಲೇಜು, ದೇವಾಲಯ, ನ್ಯಾಯಾಲಯಗಳಿಗೆ ತೆರಳಲು ಇಂದೇ ಜಂಕ್ಷನ್ ಮೂಲಕ ಸಾಗಬೇಕಿದೆ. ಬೆಳಗ್ಗೆ ಮತ್ತು ಸಂಜೆ ಈ ಭಾಗದಲ್ಲಿ ಅತ್ಯಧಿಕ ವಾಹನಗಳ ಓಡಾಟವಿದ್ದು, ಹಲವು ಅಪಘಾತಗಳೂ ನಡೆದಿವೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆ ಸುಮಾರು 200 ಮೀಟರ್‍ನಷ್ಟು ರಸ್ತೆಯ ಇಕ್ಕೆಲಗಳಲ್ಲಿ ವಿಸ್ತರಣೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಇದರೊಂದಿಗೆ ವಿವೇಕಾನಂದ ವೃತ್ತದಿಂದ ಕೂಡುರಸ್ತೆಯವರೆಗಿನ 2 ಕಿ.ಮೀ. ರಸ್ತೆಯನ್ನು ಅಗಲೀಕರಣ ಮಾಡಬೇಕೆಂದು ಮನವಿಯಲ್ಲಿ ಗಮನ ಸೆಳೆದಿದ್ದಾರೆ. ಪ್ರತಿಯನ್ನು ಶಾಸಕರು, ಜಿ.ಪಂ. ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗೆ ಸಲ್ಲಿಸಿದ್ದಾರೆ.