ಪೊನ್ನಂಪೇಟೆ, ಜೂ. 11: ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆ ಯನ್ನು ಹೆಚ್ಚಿಸಿಕೊಳ್ಳುತ್ತಿರುವ ದ್ವಿಚಕ್ರ ವಾಹವ ಸವಾರರ ಸಂಘಟನೆಯಾದ ಬೈಕರ್ಸ್ ತಂಡದ ವಾರ್ಷಿಕ ಸಂಗಮ ಕಾರ್ಯಕ್ರಮ ಇತ್ತೀಚೆಗೆ ಕೊಡಗಿನಲ್ಲಿ ಜರುಗಿತು.

‘ಆರ್15 ರೈಡರ್ಸ್ ಅಫ್ ಕೂರ್ಗ್’ (ಆರ್.ಆರ್.ಸಿ.) ಸಂಸ್ಥೆಯ ಆತಿಥ್ಯದಲ್ಲಿ ವೀರಾಜಪೇಟೆ ಸಮೀಪದ ಬೇತ್ರಿಯ ಕಂಬೀರಂಡ ಪ್ರಕಾಶ್ ಅವರ ತೋಟದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಸಿದ್ಧ ಬೈಕ್ ಸವಾರರ ಸಂಘಟನೆಯಾದ ‘ಆರ್15 ಬೈಕರ್ಸ್ ಅಫ್ ಬೆಂಗಳೂರು’ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡು ಇದರ ಮೆರಗನ್ನು ಹೆಚ್ಚಿಸಿದರು.

ಕಳೆದ ಬಾರಿ ಕೊಡಗಿನಲ್ಲಿ ಉಂಟಾದ ಅತಿವೃಷ್ಟಿ ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರಿಗಾಗಿ ಸ್ಪಂದಿಸಿದ ಆರ್15 ಬೈಕರ್ಸ್ ಅಫ್ ಬೆಂಗಳೂರು ಸಂಸ್ಥೆ ಬೆಂಗಳೂರಿನಿಂದ ಸಾಕಷ್ಟು ಪರಿಹಾರ ಸಾಮಗ್ರಿಗಳನ್ನು ಕೊಡಗಿಗೆ ಕಳುಹಿಸಿಕೊಟ್ಟಿತು. ಇದರ ಅಂಗವಾಗಿ ಕೊಡಗಿಗೆ ತಮ್ಮ ಬೈಕ್‍ಗಳಲ್ಲಿ ಭೇಟಿ ನೀಡಿದ ಆರ್15 ಬೈಕರ್ಸ್ ಅಫ್ ಬೆಂಗಳೂರು ಸಂಸ್ಥೆಯ ಸದಸ್ಯರು ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್15 ಬೈಕರ್ಸ್ ಅಫ್ ಬೆಂಗಳೂರು ಸಂಸ್ಥೆಯ ಅಧ್ಯಕ್ಷರಾದ ಶಿವು ಅವರು, ಪ್ರಕೃತಿ ತನ್ನ ಕೊಡುಗೆಯಾಗಿ ಧಾರೆಯೆರದ ಕೊಡಗು ಜಿಲ್ಲೆಯನ್ನು ಸಂರಕ್ಷಿಸುವದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಕೊಡಗಿನ ಪರಿಸರ ಮತ್ತು ಪ್ರಕೃತಿಯ ಸುಂದರವಾದ ಉಡುಗೊರೆ ಯಂತಿರುವ ಕೊಡಗಿನ ಭೂ ಪ್ರದೇಶದಲ್ಲಿ ಮನುಷ್ಯನ ಕೌರ್ಯ ಕೊನೆಯಾಗಬೇಕು. ಅದಕ್ಕಾಗಿ ನಾಡಿನ ಎಲ್ಲ ಪ್ರಕೃತಿಪ್ರಿಯರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಆರ್15 ಬೈಕರ್ಸ್ ಅಫ್ ಬೆಂಗಳೂರು ಸಂಸ್ಥೆಯ ಪದಾಧಿಕಾರಿಗಳಾದ ಅರ್ಜುನ, ಕಿಟ್ಟಿ, ಸೂರಜ್, ಆರ್15 ರೈಡರ್ಸ್ ಅಫ್ ಕೂರ್ಗ್ (ಆರ್.ಆರ್.ಸಿ.) ಸಂಸ್ಥೆಯ ಪದಾಧಿಕಾರಿಗಳಾದ ಅಕ್ಕಳತಂಡ ಝಿಯಾ, ಕುಮ್ಮಂಡ ರೋನಿಕ್, ಕಂಬೀರಂಡ ಹೃಶ್ವಿಕ್ ಸೇರಿದಂತೆ ಉಭಯ ಸಂಸ್ಥೆಯ ನೂರಾರು ಸವಾರರು ಪಾಲೊಂಡಿದ್ದರು.