ಸೋಮವಾರಪೇಟೆ, ಜೂ. 11: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದು, ಅಗತ್ಯ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕೆಂದು ಕಾಫಿ, ಕರಿಮೆಣಸು ಮತ್ತು ಏಲಕ್ಕಿ ಬೆಳೆಗಾರರ ಹೋರಾಟ ಸಮಿತಿ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಾಲೂಕು ಕೇಂದ್ರದಲ್ಲಿರುವ ಆಸ್ಪತ್ರೆಯಲ್ಲಿ ಉತ್ತಮ ಕಟ್ಟಡ ಸೇರಿದಂತೆ ಇನ್ನಿತರ ಸೌಕರ್ಯಗಳಿದ್ದರೂ ಅಗತ್ಯವಾಗಿ ಇರಬೇಕಾದ ವೈದ್ಯರೇ ಇಲ್ಲ. ಇದರಿಂದಾಗಿ ರೋಗಿಗಳು ಸೂಕ್ತ ಚಿಕಿತ್ಸೆ ಇಲ್ಲದೇ ತೊಂದರೆ ಎದುರಿಸುವಂತಾಗಿದೆ ಎಂದು ಸಮಿತಿಯ ಚಂಗಪ್ಪ ಸೇರಿದಂತೆ ಪದಾಧಿಕಾರಿಗಳು ತಹಸೀಲ್ದಾರ್ ಗೋವಿಂದರಾಜು ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಆಸ್ಪತ್ರೆಯಲ್ಲಿ ಮೂಳೆ ತಜ್ಞರು, ಜನರಲ್ ಸರ್ಜನ್, ಶಸ್ತ್ರ ಚಿಕಿತ್ಸಕರು, ಅರೆವಳಿಕೆ ತಜ್ಞರು, ಜನರಲ್ ಮೆಡಿಸಿನ್ ವೈದ್ಯರು ಇಲ್ಲ. ಮಂಜೂರಾದ 11 ಹುದ್ದೆಗಳಲ್ಲಿ ಕೇವಲ ಮೂವರು ಮಾತ್ರ ಖಾಯಂ, ಮೂವರು ಗುತ್ತಿಗೆ ಆಧಾರದ ವೈದ್ಯರುಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಣ್ಣಪುಟ್ಟ ಖಾಯಿಲೆಗಳಿಗೂ ಮಡಿಕೇರಿ, ಮೈಸೂರು ಆಸ್ಪತ್ರೆಗಳಿಗೆ ತೆರಳಬೇಕಿದ್ದು, ತಕ್ಷಣ ಆಸ್ಪತ್ರೆಗೆ ಅಗತ್ಯ ವೈದ್ಯರುಗಳನ್ನು ನಿಯೋಜಿಸಬೇಕೆಂದು ಮನವಿಯಲ್ಲಿ ಗಮನ ಸೆಳೆಯಲಾಯಿತು.

ಈ ಬಗ್ಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಿದ ಸಂದರ್ಭ ಮಾತನಾಡಿದ ಅವರು, ಮುಂದಿನ ಎರಡು ದಿನಗಳ ಒಳಗೆ ಮೂಳೆ ತಜ್ಞರನ್ನು ನಿಯೋಜಿಸಲು ಕ್ರಮ ಕೈಗೊಳ್ಳ ಲಾಗಿದೆ. ಹೆಚ್ಚಿನ ವೈದ್ಯರ ನೇಮಕಕ್ಕೆ ಸರ್ಕಾರದ ಗಮನ ಸೆಳೆಯಲಾಗುವದು ಎಂದರು.

ಮನವಿಯನ್ನು ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಜಿಲ್ಲಾಧಿ ಕಾರಿಗಳು, ಜಿಲ್ಲಾ ಆರೋಗ್ಯಾಧಿ ಕಾರಿಗಳಿಗೆ ತಹಶೀಲ್ದಾರ್ ಮೂಲಕ ಸಲ್ಲಿಸಲಾಯಿತು.

ಈ ಸಂದರ್ಭ ಸಂಘದ ಪದಾಧಿಕಾರಿಗಳಾದ ರಾಜೇಶ್, ಗಿರೀಶ್, ಪ್ರಸ್ಸಿ, ಹೇಮಂತ್, ಕ್ಲೀಟಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.