ಮಡಿಕೇರಿ, ಜೂ. 8: ಕಳೆದ ಮಳೆಗಾಲ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದರ್ಭ ಸಂಕಷ್ಟದಲ್ಲಿ ಸಿಲುಕಿರುವ ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಪರಿಹಾರ ನಿಧಿ ಜಮೆಗೊಳಿಸಿದ್ದು, ಸಂಬಂಧಿಸಿದ ಸಂತ್ರಸ್ತ ಫಲಾನುಭವಿಗಳು ತಮ್ಮ ಆಧಾರ್ ಸಂಖ್ಯೆ ಜೋಡಣೆಯ ಸಮರ್ಪಕತೆ ಬಗ್ಗೆ ಆಯಾ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಸಲಹೆ ನೀಡಿದ್ದಾರೆ.ಅಲ್ಲದೆ, ಸಂಬಂಧಪಟ್ಟವರ ಬ್ಯಾಂಕ್ ಖಾತೆಯೊಂದಿಗಿನ ಆಧಾರ್ ಸಂಖ್ಯೆ ಜೋಡಣೆಯ ನಿಖರತೆಯನ್ನು ಖಚಿತಪಡಿಸಿಕೊಂಡು, ಹಣ ಜಮೆಯಾಗದವರು ತಮ್ಮ ತಮ್ಮ ಆಧಾರ್ ಸಂಖ್ಯೆಯಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಪರಿಹಾರ ನಿಧಿ ಹೊಂದಿಕೊಳ್ಳಬೇಕೆಂದು ನೆನಪಿಸಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 33,920 ಮಂದಿ ಪರಿಹಾರ ಹೊಂದಿದ್ದು, ಸಂಬಂಧಿಸಿದವರ ಖಾತೆಗಳಿಗೆ ಒಟ್ಟು ರೂ.44.92 ಕೋಟಿ ಮೊತ್ತ ಸಂದಾಯ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಅನೇಕ ಮನೆಗಳು ಹಾನಿಗೊಂಡು ಭೂಕುಸಿತ ಉಂಟಾಗಿ ಗದ್ದೆ, ತೋಟಗಳು ಕೊಚ್ಚಿಹೋಗಿದ್ದು, ಕೆಲವು ಭಾಗಗಳಲ್ಲಿ ಗದ್ದೆ ತೋಟಗಳಲ್ಲಿ ಮಣ್ಣು ತುಂಬಿಕೊಂಡು, ಕೆಲವು ಭಾಗಗಳಲ್ಲಿ ಫಸಲು ಕೊಳೆತುಹೋಗಿ ಅಪಾರ ಬೆಳೆಹಾನಿ ಸಂಭವಿಸಿದೆ. ಈ ಪ್ರಕರಣಗಳಲ್ಲಿ ಸರ್ಕಾರವು ಆದ್ಯತೆ ಮೇರೆಗೆ ಪರಿಹಾರವನ್ನು ನೇರ ಪಾವತಿ ಮೂಲಕ 33,920 ಸಂತ್ರಸ್ತರಿಗೆ 44,92 ಕೋಟಿ ರೂ.ಗಳನ್ನು ಸಂತ್ರಸ್ತರ ಆಧಾರ್ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಈ ಪೈಕಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಆಗದ ಮತ್ತು ಆಧಾರ್ ಸಂಖ್ಯೆ ನಿಷ್ಕ್ರಿಯವಾದ ಕಾರಣ 2,191 ಪ್ರಕರಣಗಳಲ್ಲಿ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ಹಣವನ್ನು ಜಮೆ ಮಾಡಲಾಗಿದ್ದರೂ ಸಹ ರೂ. 2.58 ಕೋಟಿ ಮೊತ್ತವು ವಾಪಸ್ ಬಂದಿರುತ್ತದೆ. ಸದರಿ 2,191 ಪ್ರಕರಣಗಳ ಪಟ್ಟಿಯನ್ನು ಕೊಡಗು ಜಿಲ್ಲಾ ವೆಬ್ಸೈಟ್ hಣಣಠಿ://ಞoಜಚಿgu.ಟಿiಛಿ.iಟಿನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗಿದೆ.
ಬೆಳೆ ಪರಿಹಾರ ಪಾವತಿಯಾಗಿರದ ಫಲಾನುಭವಿಗಳು ಸದರಿ ಪಟ್ಟಿಯನ್ನು ಪರಿಶೀಲಿಸಿಕೊಂಡು, ತಮ್ಮ ಖಾತೆಗೆ ಹಣ ಜಮೆಯಾಗದಿರುವ ಕಾರಣವನ್ನು ತಿಳಿದು, ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗಳಿಗೆ
(ಮೊದಲ ಪುಟದಿಂದ) ಜೋಡಣೆಯಾಗದಿದ್ದಲ್ಲಿ ಸಂಬಂಧಪಟ್ಟ ಬ್ಯಾಂಕನ್ನು ಸಂಪರ್ಕಿಸಿ ಆಧಾರ್ ಸಂಖ್ಯೆ ಜೋಡಣೆಗೆ ಕ್ರಮ ವಹಿಸುವದು. ಅದೇ ರೀತಿ ಆಧಾರ್ ಸಂಖ್ಯೆ ನಿಷ್ಕ್ರಿಯವಾದ ಪ್ರಕರಣಗಳಲ್ಲಿ ಸಂಬಂಧಪಟ್ಟ ಆಧಾರ್ ಕೇಂದ್ರಗಳಲ್ಲಿ (ನಾಡ ಕಚೇರಿಗಳು, ಗ್ರಾಮ ಪಂಚಾಯತ್ಗಳು, ಜಿಲ್ಲಾಧಿಕಾರಿಗಳ ಕಚೇರಿಯ ಸ್ಪಂದನಾ ಕೇಂದ್ರಗಳಲ್ಲಿ) ಆಧಾರ್ ಸಂಖ್ಯೆಯನ್ನು ಸಕ್ರಿಯಗೊಳಿಸಲು ಕ್ರಮ ವಹಿಸುವದು. ಈ ಪ್ರಕ್ರಿಯೆ ಮುಗಿದ ನಂತರ ಫಲಾನುಭವಿಗಳ ಖಾತೆಗೆ ಹಣವನ್ನು ಮರು ಜಮೆ ಮಾಡಲು ಕ್ರಮ ವಹಿಸಲಾಗುವದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.