ಕುಶಾಲನಗರ, ಜೂ. 8: ಕಾವೇರಿ ನದಿಯಲ್ಲಿ ಬಾಲಕ ಸೇರಿದಂತೆ ಇಬ್ಬರು ಮುಳುಗಿ ಮೃತಪಟ್ಟ ಘಟನೆ ಕುಶಾಲನಗರದಲ್ಲಿ ನಡೆದಿದೆ. ಸ್ಥಳೀಯ ಆರ್ಎಂಸಿ ಹತ್ತಿರ ಕಾವೇರಿ ನದಿಯಲ್ಲಿ ಬಟ್ಟೆ ಒಗೆಯಲು ಶನಿವಾರ ತೆರಳಿದ ಸಂದರ್ಭ ದುರ್ಘಟನೆ ನಡೆದಿದೆ. ಕುಶಾಲನಗರ ಬದ್ರುನ್ನೀಸಾ ಲೇಔಟ್ ನಿವಾಸಿ ನಾಸಿರ್ ಖಾನ್ (44) ಮತ್ತು ಈತನ ಸಂಬಂಧಿ ಸೈಯದ್ ಅಕ್ಮಲ್ ಅವರ ಪುತ್ರ ಸೈಯದ್ ಮೋಹಿನ್ (14) ಮೃತ ದುರ್ದೈವಿಗಳು. ರಂಜಾನ್ ಹಬ್ಬಕ್ಕೆಂದು ಕುಶಾಲನಗರದ ಬದ್ರುನ್ನೀಸಾ ಲೇಔಟ್ನ ನಿವಾಸಿ ನಾಸಿರ್ ಖಾನ್ ಮನೆಗೆ ಆಗಮಿಸಿ ಶನಿವಾರ ಬಟ್ಟೆ ತೊಳೆಯಲೆಂದು ಕುಟುಂಬದವರೊಂದಿಗೆ ಸಂಬಂಧಿಕರು ನದಿಗೆ ತೆರಳಿದ ಸಂದರ್ಭ ಘಟನೆ ಸಂಭವಿಸಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ನದಿ ತಟದಲ್ಲಿ ಸಂಬಂಧಿಕರ ಮಕ್ಕಳು ಆಟವಾಡುತ್ತಿದ್ದ ಸಂದರ್ಭ ಬಾಲಕ ಸೈಯದ್ ಮೋಹಿನ್ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಈತನನ್ನು ರಕ್ಷಿಸಲು ಸಂಬಂಧಿ ನಾಸಿರ್ ಖಾನ್ ಕೂಡ ನೀರಿಗಿಳಿದಿದ್ದಾನೆ. ಈ ವೇಳೆ ಇಬ್ಬರೂ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಮುಳುಗುತಜ್ಞ ರಾಮಕೃಷ್ಣ ಮೃತದೇಹಗಳನ್ನು ಮೇಲಕ್ಕೆತ್ತುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮೃತದೇಹಗಳನ್ನು ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೃತ ನಾಸಿರ್ ಖಾನ್ ಅವರ ಪತ್ನಿ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.