ಸೋಮವಾರಪೇಟೆ, ಜೂ. 4: ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ತಾ. 8ರಂದು ತಾಲೂಕಿನ ಶಾಂತಳ್ಳಿ ಗ್ರಾಮದಲ್ಲಿ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಸಿದ್ಧತಾ ಕಾರ್ಯಗಳು ನಡೆಯುತ್ತಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ತಿಳಿಸಿದರು.

ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಒದಗಿಸಿದ ಅವರು, ಶಾಂತಳ್ಳಿಯ ಶ್ರೀಕುಮಾರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಸಮ್ಮೇಳನ ನಡೆಯಲಿದ್ದು, ಅಂದು ಬೆಳಿಗ್ಗೆ 8ಗಂಟೆಗೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು. ತಹಶೀಲ್ದಾರ್ ಗೋವಿಂದರಾಜು ಅವರು ರಾಷ್ಟ್ರಧ್ವಜ, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್‍ಸಾಗರ್ ನಾಡಧ್ವಜ, ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ಅವರು ಪರಿಷತ್‍ನ ಧ್ವಜಗಳನ್ನು ಆರೋಹಣ ಮಾಡಲಿದ್ದಾರೆ ಎಂದರು.

ಸಮ್ಮೇಳನದ ಅಂಗವಾಗಿ ಶಾಂತಳ್ಳಿಯಲ್ಲಿ ವಿವಿಧ ದ್ವಾರಗಳನ್ನು ನಿರ್ಮಿಸಲಾಗುವದು. ಬೆಳಿಗ್ಗೆ 9 ಗಂಟೆಗೆ ತಲ್ತರೆಶೆಟ್ಟಳ್ಳಿ ಕೂಡುರಸ್ತೆಯಿಂದ ಸಮ್ಮೇಳನಾಧ್ಯಕ್ಷರಾದ ಡಾ. ಹೆಬ್ಬಾಲೆ ಕೆ. ನಾಗೇಶ್ ಅವರ ಮೆರವಣಿಗೆ ನಡೆಯಲಿದೆ. ಹರಗದ ಅಪ್ಪಯ್ಯ ಸಭಾಂಗಣ ಮತ್ತು ಗೌಡನ ದೊಡ್ಡಯ್ಯ ಪ್ರಧಾನ ವೇದಿಕೆಯನ್ನು ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಉದ್ಘಾಟಿಸಲಿದ್ದು, ಸಮ್ಮೇಳನ ವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ವಹಿಸಲಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಸಂಸದ ಪ್ರತಾಪ್‍ಸಿಂಹ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಜಲಾ ಕಾಳಪ್ಪ, ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್‍ಕುಮಾರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಲೇಖಕಿ ಶ.ಗ. ನಯನತಾರ ಅವರು ರಚಿಸಿರುವ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಪರಿಸರದ ಸಾಂಸ್ಕøತಿಕ ಸಂಪತ್ತು ಪುಸ್ತಕ ಮತ್ತು ಹೆಬ್ಬಾಲೆ ನಾಗೇಶ್ ಅವರ ಕೊಡವರ ಸಾಂಸ್ಕøತಿಕ ಪದಕೋಶ ಮತ್ತು ಮೌಖಿಕ ಸಂಸ್ಕøತಿ ಪುಸ್ತಕಗಳ ಬಿಡುಗಡೆ ಸಮಾರಂಭವೂ ಸಮ್ಮೇಳನದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮಧ್ಯಾಹ್ನ 1.30ಕ್ಕೆ ಕನ್ನಡ ಗೀತೆ ಗಾಯನ, 2.30ಕ್ಕೆ ವಿಚಾರಗೋಷ್ಠಿ, 3.30ಕ್ಕೆ ಕವಿಗೋಷ್ಠಿ, ಸಂಜೆ 5 ಗಂಟೆಗೆ ಬಹಿರಂಗ ಅಧಿವೇಶನ, 5.15ಕ್ಕೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಮಾಜೀ ಸಚಿವ ಬಿ.ಎ. ಜೀವಿಜಯ, ಶ್ರೀ ಸದಾಶಿವ ಸ್ವಾಮೀಜಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಲೋಕೇಶ್ ಸಾಗರ್ ತಿಳಿಸಿದರು.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಕಸಾಪದಿಂದ ತಾಲೂಕಿನ ಗ್ರಾಮೀಣ ಪ್ರದೇಶ ಶಾಂತಳ್ಳಿಯಲ್ಲಿ ಕನ್ನಡ ನುಡಿಹಬ್ಬ ಆಯೋಜಿಸಿರುವದು ಸಂತಸ ತಂದಿದ್ದು, ಹೋಬಳಿ ವ್ಯಾಪ್ತಿಯ ಗ್ರಾಮಸ್ಥರೆಲ್ಲರೂ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದಾರೆ ಎಂದರು.

ಸಮ್ಮೇಳನದ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಪೂರ್ಣಕುಂಭ ಮೆರವಣಿಗೆ, ಸ್ತಬ್ಧಚಿತ್ರ, ಗೊಂಬೆ ಕುಣಿತ ಭಾಗವಹಿಸಲಿದ್ದು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದಲೂ ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದು ಆರ್ಥಿಕ ಸಮಿತಿ ಸದಸ್ಯೆ ಲೋಕೇಶ್ವರಿ ಗೋಪಾಲ್ ತಿಳಿಸಿದರು.

ಗೋಷ್ಠಿಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಕಾರ್ಯ ದರ್ಶಿ ಕೆ.ಎ. ಆದಂ, ಮೆರವಣಿಗೆ ಸಮಿತಿ ಸದಸ್ಯ ಡಿ.ಎಸ್. ಲಿಂಗರಾಜು ಅವರುಗಳು ಉಪಸ್ಥಿತರಿದ್ದರು.