ಮಡಿಕೇರಿ, ಮೇ 8: ಸಾರ್ವಜನಿಕ ವಲಯದಲ್ಲಿ ತೋಟಗಾರಿಕಾ ಬೆಳೆಗಳನ್ನು ಅಭಿವೃದ್ಧಿಗೊಳಿಸುವ ಸೋಗಿನಲ್ಲಿ; ರೈತರಿಂದ ಠೇವಣಿ ಸಂಗ್ರಹಿಸಿ ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಮೈತ್ರಿ ಪ್ಲಾಂಟೇಶನ್ ಹಾಗೂ ಇತರ ಸಂಸ್ಥೆಗಳ ಹೆಸರಿನಲ್ಲಿ ಇಂತಹ ಹೂಡಿಕೆ ಮಾಡಿದವರಿದ್ದರೆ, 30 ದಿನಗಳ ಒಳಗಾಗಿ ಕೋಲಾರದ ಉಪ ವಿಭಾಗ ಕಚೇರಿಯಲ್ಲಿ ದೂರಿನೊಂದಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಮೈತ್ರಿ ಪ್ಲಾಂಟೇಷನ್ ಮತ್ತು ಹಾರ್ಟಿಕಲ್ಚರ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಅಂಗ ಸಂಸ್ಥೆಗಳು ಸಾರ್ವಜನಿಕರಿಂದ ವಿವಿಧ ರೀತಿಯ ಠೇವಣಿಗಳನ್ನು ಸಂಗ್ರಹಿಸಿದ್ದು ಅವುಗಳ ನಿಗಧಿತ ಅವಧಿ ಮುಗಿದ ನಂತರ ಅದರ ಹೂಡಿಕೆದಾರರಿಗೆ ಹಿಂತಿರುಗಿಸದೆ ವಂಚಿಸಿರುವದು ಸರ್ಕಾರದ ಗಮನಕ್ಕೆ ಬಂದಿದೆ. ಇದರಂತೆ ಈ ವಂಚಿತ ಸಂಸ್ಥೆಯ ಆಸ್ತಿಯನ್ನು ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಸಂರಕ್ಷಣಾ ಕಾಯ್ದೆ-2004 ರ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದು ಹರಾಜು ಪ್ರಕ್ರಿಯೆಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ನ್ಯಾಯಾಲಯದ ಆದೇಶದಂತೆ ಹರಾಜಿನಿಂದ ಬಂದ ಹಣವನ್ನು ಠೇವಣಿದಾರರಿಗೆ ವಿತರಿಸಲು ನ್ಯಾಯಾಲಯಕ್ಕೆ ಠೇವಣಿದಾರರ ವಿವರಗಳನ್ನು ಸಲ್ಲಿಸಬೇಕಾಗಿದೆ.

ಆದ್ದರಿಂದ ಮೈತ್ರಿ ಪ್ಲಾಂಟೇಷನ್ ಮತ್ತು ಹಾರ್ಟಿಕಲ್ಚರ್ ಮತ್ತು ಅದರ ಅಂಗ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿರುವ ಠೇವಣಿದಾರರು ಅವರ ಠೇವಣಿಗಳಿಗೆ ಸಂಬಂಧಿಸಿದಂತೆ ಈ ಸಂಸ್ಥೆಯವರು ನೀಡಿರುವ ಬಾಂಡ್, ಪಾಸ್ ಪುಸ್ತಕ ಮತ್ತಿತರ ಮೂಲ ದಾಖಲೆಗಳೊಂದಿಗೆ ಅರ್ಜಿಗಳನ್ನು ಈ ಪ್ರಕಟಣೆಯ ದಿನಾಂಕದಿಂದ 30 ದಿನದೊಳಗೆ ಈ ಕಚೇರಿಗೆ ಸಲ್ಲಿಸಬಹುದಾಗಿದೆ. ನಿಗದಿತ ಅವಧಿಯ ನಂತರ ಬಂದ ಕೋರಿಕೆಗಳನ್ನು ಪರಿಗಣಿಸಲಾಗುವದಿಲ್ಲ ಎಂದು ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕೋಲಾರದ ಸಹಾಯಕ ಕಮಿಷನರ್ ತಿಳಿಸಿದ್ದಾರೆ.