ಗೋಣಿಕೊಪ್ಪಲು.ಏ.28: ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಜಿಲ್ಲೆಯ ವಿವಿಧ ಭಾಗದಿಂದ ಆದಿವಾಸಿಗಳು ಮುಂಜಾನೆಯಿಂದಲೇ ಮೈದಾನದತ್ತ ಅಗಮಿಸುತ್ತಿದ್ದು; ತಮ್ಮ ಜನಾಂಗದ ಬಾಂಧವರೊಂದಿಗೆ ಬೆರೆತರು. ಹೊಸ ಹೊಸ ಉಡುಪುಗಳನ್ನು ತೊಟ್ಟು ಯುವಕ ಯುವತಿಯರು ವರ್ಷಕ್ಕೊಮ್ಮೆ ನಡೆಯುವ ಸಮಾಜದ ಕ್ರೀಡೋತ್ಸವದಲ್ಲಿ ಭಾಗಿಗಳಾದರು.

ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿವರ್ಯರನ್ನು ಸಾಂಪ್ರದಾಯಿಕ ದುಡಿಕೊಟ್ಟಿನ ಮೂಲಕ ಮೈದಾನಕ್ಕೆ ಬರಮಾಡಿಕೊಳ್ಳಲಾಯಿತು. 48 ಕ್ರಿಕೇಟ್ ತಂಡಗಳು ಭಾಗವಹಿಸಿದ್ದವು. ಅತಿಥಿಗಳು ಯರವ ಸಮಾಜ ನಡೆಸಿಕೊಂಡು ಬರುತ್ತಿರುವ ಕ್ರಿಡೋತ್ಸವ ವರ್ಷದಿಂದ ವರ್ಷಕ್ಕೆ ಯಶಸ್ವಿಯಾಗುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕೊಡಗಿನ ಗಿರಿಜನರ ಸಂಸ್ಕøತಿ, ಆಚಾರ-ವಿಚಾರ, ಉಡುಗೆ, ತೊಡುಗೆ,ಭಾಷೆಯನ್ನು ಉಳಿಸುವ ಪ್ರಯತ್ನವಾಗಿ ಐದು ದಿನಗಳ ಕಾಲ ನಡೆದ 8ನೇ ವರ್ಷದ ಇಡೆಮಲೆಲಾತ್ಲೇರಂಡ ಕ್ರೀಡೋತ್ಸವಕ್ಕೆ ತೆರೆ ಎಳೆಯಲಾಯಿತು. ಮುಂದಿನ ವರ್ಷ ಯೇವುಲಾತ್ಲೇರಂಡÀ ಯರವ ಮನೆತನದ ಕ್ರಿಕೆಟ್ ಕಪ್ ನಡೆಯಲಿರುವದಾಗಿ ಆಯೋಜಕರು ಘೋಷಿಸಿದರು.

ಸಾಧಕರಿಗೆ ಸನ್ಮಾನ

ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗಾಗಿ ಶೌರ್ಯಚಕ್ರ ಪ್ರಶಸ್ತಿ ವಿಜೇತ ಯೋಧ ಹೆಚ್.ಎನ್.ಮಹೇಶ್, ಗೋಣಿಕೊಪ್ಪಲುವಿನ ಉಂಬಯಿ, ಜೇನುಕುರುಬರ ರಮೇಶ್, ಯರವ ಸಮಾಜದ ಸಂಚಾಲಕ ಪಿ.ಕೆ.ಸಿದ್ದಪ್ಪ, ಚನ್ನೆಂಗಿಯ ಪಿ.ಎಸ್.ಶಶಿ, ಎಸ್‍ಎಸ್ ಎಲ್‍ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ ಪಿ.ಆರ್.ಸುಮಿತ್ರ ಅವರನ್ನು ಗೌರವಿಸಲಾಯಿತು.