ಸೋಮವಾರಪೇಟೆ, ಏ. 21: ಯಡೂರು ಗ್ರಾಮದ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ನೂರಾರು ಭಕ್ತಾದಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಹಲವು ಧಾರ್ಮಿಕ ವಿಧಿ ವಿಧಾನಗ ಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಗ್ರಾಮದ ಸುಗ್ಗಿಕಟ್ಟೆಯಲ್ಲಿ ಸೇರಿದ ಗ್ರಾಮಸ್ಥರು ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಸುಗ್ಗಿ ಕಟ್ಟೆಯ ಮುಂಭಾಗ ಎಡೆ ಇಟ್ಟು, ಗ್ರಾಮದ ಸುಭೀಕ್ಷೆ, ಮಳೆ, ಬೆಳೆ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ದೇವರ ಒಡೆಕಾರರು ಸೇರಿದಂತೆ ಪೂಜಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮಂದಿ ತಮಟೆ ವಾದ್ಯದೊಂದಿಗೆ ಸುಗ್ಗಿಕಟ್ಟೆಯ ಪ್ರದಕ್ಷಿಣೆಯೊಂದಿಗೆ ದೇವಿಯ ಇಷ್ಟಾರ್ಥಗಳನ್ನು ಪೂರೈಸಿದರು. ನಂತರ ಮಹಿಳೆಯರು, ಮಕ್ಕಳು ದೇವಿಗೆ ಪೂಜೆ ಸಲ್ಲಿಸಿದರು. ಕೆಲವರು ಹರಕೆಯನ್ನು ತೀರಿಸಿದರೆ, ಕೆಲವರು ಹರಕೆ ಮಾಡಿಕೊಂಡರು.

ದೇವಿಗೆ ಸಮರ್ಪಿಸಿದ ಎಡೆಯನ್ನು ಭಕ್ತಾದಿಗಳಿಗೆ ಹಂಚಲಾಯಿತು. ನಂತರ ಗ್ರಾಮಸ್ಥರು ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡರು. ಶನಿವಾರ ಬೆಳಿಗ್ಗೆ ಗ್ರಾಮದ ದೇವರ ಬಾವಿಯಲ್ಲಿ ಬಸವಣ್ಣ ದೇವರ ಗಂಗಸ್ನಾನ ನಡೆಯಿತು. ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಇಟ್ಟು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ದೇವರ ಒಡೆಕಾರರಾಗಿದ್ದ ನಿಂಗಪ್ಪ, ನಾಗರಾಜ್, ಬೆಳ್ಳಿಯಪ್ಪ, ದಯಾನಂದ, ದಿನೇಶ್ ಸುಗ್ಗಿ ಉತ್ಸವದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚಂದ್ರಪ್ಪ ಮತ್ತು ಧನಂಜಯ ಮಜ್ಜನೆ ಹೊತ್ತು ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು.

ಭಾನುವಾರ ಮಲ್ಲಸುಗ್ಗಿ, ಸೋಮವಾರ ಹಗಲು ಸುಗ್ಗಿ ಮಂಗಳವಾರ ಮಾರಿ ಕಳುಹಿಸುವ ಧಾರ್ಮಿಕ ಆಚರಣೆಯೊಂದಿಗೆ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವ ಕೊನೆಗೊಳ್ಳಲಿದೆ ಎಂದು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ವೈ.ಡಿ.ಚಂದ್ರಪ್ಪ ತಿಳಿಸಿದರು. ಸಮಿತಿಯ ಕಾರ್ಯದರ್ಶಿ ಹೇಮಂತ್, ಉಪಾಧ್ಯಕ್ಷ ವೆಂಕಟೇಶ್ ಮತ್ತು ಸದಸ್ಯರುಗಳು ಸುಗ್ಗಿ ಉತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸಿದರು.