ಮಡಿಕೇರಿ, ಏ. 3: ಮಂಜಿನ ನಗರಿ ಮಡಿಕೇರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ರಾಜಾಸೀಟು ಉದ್ಯಾನವನದ ಬಳಿ ಇಂದು ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಹೆಡೆ ಎತ್ತಿ ರಸ್ತೆಯ ನಡುವೆ ಕಂಡು ಬಂದ ಹಾವೊಂದು ಒಂದೆರೆಡು ತಾಸು ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ ಘಟನೆಯಿದು.ಅಪರಾಹ್ನ ಸುಮಾರು 12.30 ರಿಂದ 2.30ರ ತನಕವೂ ರಸ್ತೆಯಲ್ಲಿ ಈ ನಾಗರಾಜ ವಿರಾಜಮಾನವಾಗಿದ್ದು, ಜನತೆಯೂ ಭೀತಿಗೊಳಗಾಗಿ ನಿಂತಿರಬೇಕಾಯಿತು. ರಾಜಾಸೀಟು ಬಳಿಯ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಎದುರಿನಿಂದ ಇಂದಿರಾನಗರದತ್ತ ತೆರಳುವ ರಸ್ತೆಯಲ್ಲಿ ಈ ವಿಸ್ಮಯ ಕಂಡು ಬಂದಿತ್ತು. ಜನತೆಯ ಮಾತಿನಂತೆ ಈ ಜಾಗದ ಆಸುಪಾಸಿನಲ್ಲಿ ಹಾವು ಹಾಗೂ ಮುಂಗುಸಿಯ ನಡುವೆ ಕಾದಾಟ ನಡೆಯುತಿತ್ತಂತೆ. ಈ ಸಂದರ್ಭ ಜನರನ್ನು ನೋಡಿ ಮುಂಗುಸಿ ಜಾಗ ಖಾಲಿ ಮಾಡಿದೆ. ಆದರೆ ಇದನ್ನು ಎದುರಿಸುತ್ತಿದ್ದ ಹಾವು ಮಾತ್ರ ಹೆಡೆ ಎತ್ತಿ ರಸ್ತೆಗಡ್ಡ ನಿಂತಿತ್ತು. -ಲಕ್ಷ್ಮೀಶ್