ಶನಿವಾರಸಂತೆ, ಏ.2: ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಕೊಳತ್ತೂರು ಗಂಗೆಕೊಪ್ಪಲು ಗ್ರಾಮದ ತೋಟವೊಂದರಲ್ಲಿ ಕಾರ್ಮಿಕನೋರ್ವ ಕಾಳು ಮೆಣಸು ಕುಯ್ಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದು ಸಾವನ್ನಪ್ಪಿದ್ದು, ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ನಿಡ್ತ ಪಂಚಾಯಿತಿ ವ್ಯಾಪ್ತಿಯ ಒಡೆಯನಪುರ ಗ್ರಾಮದ ಕೂಲಿ ಕಾರ್ಮಿಕ ವಿ.ಕೆ. ಸಂಜೀವ (62) ಎಂಬವರು ಸೋಮವಾರ ಚಿಕ್ಕಕೊಳತ್ತೂರು ಗಂಗೆಕೊಪ್ಪಲು ಗ್ರಾಮದ ವಿಜಯಕುಮಾರ್ ಎಂಬವರ ತೋಟಕ್ಕೆ ಕಾಳು ಮೆಣಸು ಕುಯ್ಯಲು ಹೋಗಿದ್ದು, ಕಾಳು ಮೆಣಸು ಕುಯ್ಯುವಾಗ ಆಕಸ್ಮಿಕವಾಗಿ ಕಾರಿ ಜಾರಿ ಮರದಿಂದ ಬಿದ್ದಿದ್ದಾರೆ. ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ.

ಮೃತರ ಮಗ ವಿ.ಎಸ್. ಉಮೇಶ್ ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.