ಪೆರಾಜೆ, ಮಾ. 16: ಇಲ್ಲಿಗೆ ಸಮೀಪದ ಕಲ್ಲುಚರ್ಪೆ ಗೊರವನ ಗುಂಡಿ ತಿರುವಿನಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಧ್ಯಾಹ್ನ 3.30 ಗಂಟೆ ಸುಮಾರಿಗೆ ನಡೆದಿದೆ. ಹಾಸನದಿಂದ ಸಂಪಾಜೆ-ಪೆರಾಜೆ ಗಡಿ ಮಾರ್ಗವಾಗಿ ಮಂಗಳೂರಿಗೆ ಹೋಗುತಿದ್ದ (ಕೆಎ-14 ಪಿ-5577) ಕಾರು ಸುಳ್ಯದಿಂದ ಪೆರಾಜೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ದೀಪಕ್ ಕುಂದಲ್ಪಾಡಿ (32) ಎಂಬವರ ಬೈಕ್ ಪರಸ್ಪರ ಡಿಕ್ಕಿಯಾಗಿದೆ. ಪರಿಣಾಮ ದೀಪಕ್ ರಸ್ತೆಗೆ ಎಸೆಯಲ್ಪಟ್ಟು ತಲೆ ಡಾಮರು ರಸ್ತೆಗೆ ಬಡಿದುದರಿಂದ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು.ಮೃತರು ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಅವರ ಅಣ್ಣ ದೇವಪ್ಪ ಕುಂದಲ್ಪಾಡಿ ಅವರ ಪುತ್ರ. ಸ್ಥಳಕ್ಕೆ ಸುಳ್ಯ ಹಾಗೂ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರನ್ನು ಶ್ರೀಕಂಠ ಎಂಬವರು ಚಾಲಿಸುತ್ತಿದ್ದ ಜೊತೆಯಲ್ಲಿ ಇನ್ನಿಬ್ಬರಿದ್ದರು.

- ಕಿರಣ್