ಗೋಣಿಕೊಪ್ಪ ವರದಿ, ಫೆ. 24 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಣ್ಣ ಹಾಗೂ ಅತೀಸಣ್ಣ ರೈತರನ್ನು ಕೃಷಿಯಲ್ಲಿ ಪ್ರೋತ್ಸಾಹಿಸಲು ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸಣ್ಣ ಬೆಳೆಗಾರರಿಗೆ ಹೆಚ್ಚು ಪ್ರಯೋಜನಕಾರಿ ಎಂದು ಶಾಸಕ ಕೆ. ಜಿ. ಬೋಪಯ್ಯ ಅಭಿಪ್ರಾಯಪಟ್ಟರು.
ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಉದ್ಘಾಟನೆಯ ನೇರ ಪ್ರಸಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರುಗಳು 2022 ನೇ ಇಸವಿ ಸಂದರ್ಭ ಭಾರತ ಹೆಚ್ಚು ಅಭಿವೃದ್ಧಿ ರಾಷ್ಟ್ರವಾಗಬೇಕು ಎಂಬ ಕನಸನ್ನು ನನಸು ಮಾಡುವ ಪ್ರಯತ್ನ ಇದಾಗಿದೆ. ರೈತನಿಂದಲೇ ದೇಶದ ಅಭಿವೃದ್ಧಿ ಎಂಬವದನ್ನು ಅರಿತು, ರೈತ ಹೆಚ್ಚು ಸ್ವಾಭಿಮಾನಿಯಾಗಲು ಉತ್ತೇಜಿಸಲು ಈ ಯೋಜನೆ ಸಹಕಾರಿಯಾಗಲಿದೆ. ಆರ್ಥಿಕ ಸುಧಾರಣೆಗೂ ಇದು ಪೂರಕ ಎಂದರು.
ಕೃಷಿ ಆರಂಭಿಸುವಾಗ ಹೆಚ್ಚು ಆರ್ಥಿಕ ಕೊರತೆಯಿಂದ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಇದನ್ನು ಮನಗಂಡು ಆರ್ಥಿಕ ಸಹಾಯದ ಮೂಲಕ ಬೆಳೆಯ ಬೀಜ ಖರೀದಿ, ಔಷಧಿ ಖರೀದಿಗೆ ಸಹಾಯವಾಗುವಂತೆ ನೆರವು ನೀಡುವ ಉದ್ದೇಶ ಇದಾಗಿದೆ. ಇದರಿಂದ ಕೃಷಿ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಸದಸ್ಯ ಸಿ.ಕೆ. ಬೋಪಣ್ಣ, ಪುತ್ತರಿ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಮನೆಯಪಂಡ ಸೋಮಯ್ಯ, ವಿಜ್ಞಾನಿ ಡಾ. ವೀರೇಂದ್ರಕುಮಾರ್ ಉಪಸ್ಥಿತರಿದ್ದರು. ಕೃಷಿಕರು ಉದ್ಘಾಟನೆ ನೇರ ಪ್ರಸಾರವನ್ನು ವೀಕ್ಷಿಸಿದರು. - ಸುದ್ದಿಪುತ್ರ