ಮಡಿಕೇರಿ, ಜ. 29: ಕುಂಡಾ ಮೇಸ್ತ್ರಿ ಯೋಜನೆಯಿಂದಾಗಿ ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯ ರಸ್ತೆಗಳು ಹದಗೆಟ್ಟಿದ್ದು, ರಸ್ತೆ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳದಿದ್ದಲ್ಲಿ ಮಡಿಕೇರಿ ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗಾಳಿಬೀಡು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಾಳಿಬೀಡು ಗ್ರಾ.ಪಂ. ಸದಸ್ಯ ಸುಭಾಷ್ ಆಳ್ವಾ, ಕುಂಡಾಮೇಸ್ತ್ರಿ ಯೋಜನೆಯ ಪೈಪ್ಲೈನ್ ಅಳವಡಿಸಿರುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆಯ ಮರು ಡಾಂಬರೀಕರಣ ಕಾರ್ಯವನ್ನು ಮಾರ್ಚ್ ಅಂತ್ಯ ದೊಳಗೆ ಪೂರ್ಣಗೊಳಿಸದಿದ್ದಲ್ಲಿ ನಗರಸಭೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.
2013-14 ರಲ್ಲಿ ನಗರಸಭೆ ಹಾಗೂ ಜಲಮಂಡಳಿ ಕುಂಡಾಮೇಸ್ತ್ರಿ ಯೋಜನೆ ರೂಪಿಸಿತು. ಯೋಜನೆ ಯಂತೆ ಗಾಳಿಬೀಡುವಿನ ಮೂಲಕ ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಅನುಷ್ಠಾನಗೊಂಡಿತು.
ಈ ಯೋಜನೆಯ ಅನುಷ್ಠಾನಕ್ಕೆ ಗ್ರಾಮಸ್ಥರು ಕೂಡ ನಗರಸಭೆಗೆ ಸಹಕಾರ ನೀಡಿದ್ದರು. ಆದರೆ ಕಾಮಗಾರಿ ಮುಗಿದು 4 ವರ್ಷ ಕಳೆದರು ಗ್ರಾಮದ ದರ್ಜಿಬಕ್ಕ-ಕಟ್ಟೆಕಲ್ಲು ಮೂಲಕ ಸಾಗುವ 3 ಕೀ.ಮೀ ರಸ್ತೆಯನ್ನು ದುರಸ್ತಿಗೊಳಿಸಿಲ್ಲ. ಇದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಆಡಳಿತ ವರ್ಗ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿಲ್ಲ ವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾರ್ಚ್ ತಿಂಗಳ ಅಂತ್ಯದೊಳಗೆ ರಸ್ತೆಗಳನ್ನು ದುರಸ್ತಿಗೊಳಿಸಿ ಶಾಲಾ ಮಕ್ಕಳ ಮತ್ತು ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡದಿದ್ದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರ ದೊಂದಿಗೆ ಗ್ರಾಮಸ್ಥರು ಹೋರಾಟ ಹಮ್ಮಿಕೊಳ್ಳಲಿದ್ದಾರೆ ಎಂದು ಸುಭಾಷ್ ಎಚ್ಚರಿಕೆ ನೀಡಿದರು.
ರಸ್ತೆ ದುರಸ್ತಿ ಕುರಿತು ನಗರಸಭೆ ಹಾರಿಕೆಯ ಉತ್ತರ ನೀಡುತ್ತಿದ್ದು, ಇದು ಜಲಮಂಡಳಿ ವ್ಯಾಪ್ತಿಗೆ ಬರುತ್ತದೆ ಎಂದು ಹೇಳುವ ಮೂಲಕ ಜವಾಬ್ದಾರಿಯಿಂದ ನುಣುಚಿ ಕೊಂಡಿದೆ. ಜಲಮಂಡಳಿ ಕೂಡ ಸ್ಪಂದನೆ ನೀಡುತ್ತಿಲ್ಲ, ಈ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು, ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದೆ. ಆದರೆ ನಗರಸಭೆ ರಸ್ತೆ ಅವ್ಯವಸ್ಥೆಗೆ ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿರುವದು ವಿಷಾಧನೀಯ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಗ್ರಾಮದ ಬಗ್ಗೆ ಹೇಳಿಕೆ ನೀಡುವ ನಗರಸಭಾ ಸದಸ್ಯ ನಂದಾಕುಮಾರ್ ಅವರು ಮೊದಲು ತಮ್ಮ ವಾರ್ಡ್ನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ನಂತರ ನಮ್ಮ ಬಗ್ಗೆ ಮಾತನಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದ ಅರಣ್ಯ ಸಮಿತಿ ಅಧ್ಯಕ್ಷ ಕುಂಬೇರನ ಗಣಪತಿ ಮಾತನಾಡಿ, ಈಗಾಗಲೇ ಗ್ರಾಮದ ಜನರು ಹೋರಾಟ ನಡೆಸಲು ಚಿಂತನೆ ರೂಪಿಸಿದ್ದಾರೆ. ಶೀಘ್ರ ಕಾಮಾಗಾರಿ ಪೂರ್ಣಗೊಳಿಸದಿದ್ದಲ್ಲಿ, ಮಡಿಕೇರಿ ನಗರಕ್ಕೆ ನೀರನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೂ ಮುಂದಾಗುವದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯೆ ಜಯಲಕ್ಷ್ಮಿ, ಪ್ರಮುಖರಾದ ಕೆ.ಕೆ.ಗಣೇಶ್ ಹಾಗೂ ಯು.ಎಸ್. ಕುಶಾಲಪ್ಪ ಉಪಸ್ಥಿತರಿದ್ದರು.