ಮಡಿಕೇರಿ, ಜ. 20: ಪೊಲೀಸ್ ಸಬ್ ಇನ್ಸ್ಪೆಕ್ಟರ್(ಸಿವಿಲ್) 190 ಹುದ್ದೆಗಳ ನೇಮಕಾತಿ ಸಲುವಾಗಿ ನೇಮಕಾತಿ ಪ್ರಕ್ರಿಯೆಯನ್ವಯ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ತಾ. 13 ರಂದು ಬೆಂಗಳೂರು ನಗರ, ಮೈಸೂರು ನಗರ, ಬೆಳಗಾವಿ, ದಾವಣಗೆರೆ ಮತ್ತು ಕಲಬುರಗಿ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿದೆ. ಆದರೆ ಈ ಲಿಖಿತ ಪರೀಕ್ಷೆಯ ಸಂಬಂಧ ಕೆಲವೊಂದು ಮಾಧ್ಯಮಗಳಲ್ಲಿ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಸೋರಿಕೆಯಾಗಿರುವ ಬಗ್ಗೆ ಪ್ರಸಾರವಾಗಿರುತ್ತದೆ. ಇದು ಕೇವಲ ವದಂತಿಯಾಗಿದ್ದು, ಕೆಲವು ವಂಚನೆಕೋರರು ಅಭ್ಯರ್ಥಿಗಳಿಗೆ ಮೋಸ ಮಾಡುವ ಸಲುವಾಗಿ ಪಿಎಸ್ಐ(ಸಿವಿಲ್) ಹುದ್ದೆಯ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ನಮ್ಮಲ್ಲಿ ಲಭ್ಯವಿರುವದಾಗಿ ನಂಬಿಸಿ, ಹಣಕ್ಕಾಗಿ ಅಭ್ಯರ್ಥಿಗಳನ್ನು ತಪ್ಪು ದಾರಿಗೆಳೆಯುವ ಸಂಚು ರೂಪಿಸಿ, ವಂಚನೆ ಮಾಡುವ ದೃಷ್ಠಿಯಿಂದ ಅಭ್ಯರ್ಥಿಗಳಿಗೆ ದಿಕ್ಕು ತಪ್ಪಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಕೆಲವೊಂದು ವಂಚನೆಕೋರರಿಗೆ ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ. ಈ ಪರೀಕ್ಷೆಯು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸುಸೂತ್ರವಾಗಿ ಯಶಸ್ವಿಯಾಗಿ ನಡೆದಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಯಾವದೇ ಸುಳ್ಳು ವದಂತಿಗೆ ಕಿವಿಕೊಡದೆ ಸಮಧಾನದಿಂದಿರಬೇಕೆಂದು ಮತ್ತು ಆತಂಕ ಪಡುವ ಅಗತ್ಯವಿಲ್ಲ ಎಂದು ಆಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ನೇಮಕಾತಿ, ಬೆಂಗಳೂರು ಅವರು ತಿಳಿಸಿದ್ದಾರೆ.