ಮಡಿಕೇರಿ, ಡಿ. 29 : ಪ್ರಕೃತಿ ವಿಕೋಪದಿಂದ ತೊಂದರೆಗೆ ಸಿಲುಕಿದ ಸಂತ್ರಸ್ತರು ಉತ್ಪಾದಿಸಿದ ಉತ್ಪನ್ನಗಳನ್ನು ಕೊಂಡುಕೊಳ್ಳುವ ಮೂಲಕ ಸಂತ್ರಸ್ತರಿಗೆ ಅಗತ್ಯ ಸಹಕಾರ ನೀಡುವಂತಾಗಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದೊಂದಿಗೆ ಹಾಗೂ ಭಾರತೀಯ ವಿದ್ಯಾಭವನದ ಕೌಶಲ್ಯ ನೆರವಿನೊಂದಿಗೆ ನಗರದ ರಾಜಾಸೀಟು ಬಳಿ ‘ಆಸರೆ’ ನೆರೆ ಸಂತ್ರಸ್ತರು ತಯಾರಿಸಿದ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಸಂತ್ರಸ್ತರು ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತಿದ್ದು, ಅವುಗಳನ್ನು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಿರಿಧಾನ್ಯ, ಉಪ್ಪಿನಕಾಯಿ, ಸಾಂಬಾರು ಪುಡಿ, ಹಪ್ಪಳ, ಸಂಡಿಗೆ, ಅಲಂಕಾರ ವಸ್ತುಗಳು, ಬಟ್ಟೆ ಹೀಗೆ ನಾನಾ ರೀತಿಯ ವಸ್ತುಗಳನ್ನು ಉತ್ಪಾದನೆ ಮಾಡುತ್ತಿದ್ದು, ಇವುಗಳನ್ನು ಕೊಂಡುಕೊಳ್ಳುವ ಮೂಲಕ ಸಂತ್ರಸ್ತರಿಗೆ ನೆರವು ನೀಡಿ ಪ್ರೋತ್ಸಾಹಿಸು ವಂತಾಗಬೇಕು ಎಂದರು.
ನೆರೆ ಹಾವಳಿಯಿಂದ ಹಾನಿಗೊಳಗಾದ ಕಾಲೂರು ಗ್ರಾಮವನ್ನು ಭಾರತೀಯ ವಿದ್ಯಾಭವನ ದತ್ತು ತೆಗೆದುಕೊಂಡು ನಿರಾಶ್ರಿತರಾದ ಸಂತ್ರಸ್ತರಿಗೆ ಸ್ವಾವಲಂಭಿ ಜೀವನವನ್ನು ನಡೆಸುವಂತಾಗಲು ಕೌಶಲ್ಯಾಧರಿತ ತರಬೇತಿಯನ್ನು ನೀಡಿ ಸಂತ್ರಸ್ತರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ನೆರವು ನೀಡಿದ ಭಾರತೀಯ ವಿದ್ಯಾಭವನದ ಸಹಕಾರವು ಚಿರಸ್ಮರಣೀಯ ಎಂದರು.
ಎರಡನೇ ಮೊಣ್ಣಂಗೇರಿ ಹಾಗೂ ಕಾಲೂರು ಗ್ರಾಮದ ಮಹಿಳೆಯರಿಗೆ ಸ್ವಾವಲಂಬಿ ಉದ್ಯೋಗ ನಡೆಸಲು ಆಸರೆ ಮಾರಾಟ ಮಳಿಗೆ ಉತ್ತಮ ಅವಕಾಶವನ್ನು ದೊರಕಿಸಿಕೊಟ್ಟಿದೆ ಎಂದು ಹೇಳಿದರು.
ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಈ ಮಾರಾಟ ಮಳಿಗೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ನಗರಸಭೆ ಅಧಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿ.ಪಂ. ಸಿಇಒ ಕೆ.ಲಕ್ಷ್ಮಿಪ್ರಿಯಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಮ್ತಾಜ್, ನಗರಸಭೆ ಆಯುಕ್ತ ರಮೇಶ್, ನಬಾರ್ಡ್ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ, ಭಾರತೀಯ ವಿದ್ಯಾಭವನದ ಉಪಾಧ್ಯಕ್ಷ ವಿ.ಪಿ. ಮಧುಕರ್ ಪಾಟ್ಕರ್ ಇತರರು ಇದ್ದರು.