ಕುಶಾಲನಗರ, ಡಿ. 22: ಕುಶಾಲನಗರದ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘ ಮತ್ತು ವಾಸವಿ ಯುವತಿಯರ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ ಕುರಿತಾದ ಕಾರ್ಯಕ್ರಮ ನಡೆಯಿತು.
ಸ್ಥಳೀಯ ವಿವೇಕಾನಂದ ವಿದ್ಯಾಸಂಸ್ಥೆ, ಸರಕಾರಿ ಜೂನಿಯರ್ ಕಾಲೇಜು, ಬಸವನಹಳ್ಳಿ ಮೊರಾರ್ಜಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ ಕಲೆಗಳ ಬಗ್ಗೆ ಅರಿವು ಮೂಡಿಸಲಾಯಿತು. ಸಂಪನ್ಮೂಲ ವ್ಯಕಿಗಳಾಗಿ ಪಾಲ್ಗೊಂಡಿದ್ದ ಕಟೀಲಿನ ಸ್ವರಕ್ಷಾ ಟ್ರಸ್ಟ್ನ ಕಾರ್ತಿಕ್ ಮತ್ತು ಶೋಭಲತಾ ಅವರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಒದಗಿಸಿದರು. ವಿದ್ಯಾರ್ಥಿನಿಯರು, ಮಹಿಳೆಯರು ಒಂಟಿಯಾಗಿ ಸಂಚರಿಸುವ ಸಂದರ್ಭ ಕೈಗೊಳ್ಳಬೇಕಾದ ಸ್ವರಕ್ಷಣಾ ಕ್ರಮಗಳು, ಆಗಂತುಕರು ಧಾಳಿ ನಡೆಸಿದ ಸಂದರ್ಭ ಸುಲಭವಾಗಿ ಪಾರಾಗಬಹುದಾದ ಕಲೆಗಳ ಬಗ್ಗೆ ವಿವರ ನೀಡಿದರು. ಈ ಸಂದರ್ಭ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಅಮೃತ್ರಾಜ್, ನಿರ್ದೇಶಕರುಗಳಾದ ಪ್ರಶಾಂತ್, ಶ್ಯಾಂಸುಂದರ್, ವಾಸವಿ ಯುವತಿ ಸಂಘದ ಅಧ್ಯಕ್ಷೆ ಲಕ್ಷ್ಮಿ ರವಿಚಂದ್ರ, ಉಪಾಧ್ಯಕ್ಷೆ ಲಕ್ಷ್ಮಿ ಸುಬ್ಬುರಾಜ್, ಕಾರ್ಯದರ್ಶಿ ಕನ್ನಿಕಾ ನಾಗ್, ಪ್ರಮುಖರಾದ ಸ್ವಾತಿರಾಜ್ ಬಾಲಾಜಿ, ಪೂಜಿತಾ, ಶಾಲಾ ಮುಖ್ಯ ಶಿಕ್ಷಕರುಗಳು ಇದ್ದರು.