*ಗೋಣಿಕೊಪ್ಪಲು, ಡಿ. 20: ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗು ಸೇರಿಂತೆ 8 ಜನರಿಗೆ ಹುಚ್ಚು ನಾಯಿ ಕಚ್ಚಿ ಘಾಸಿಗೊಳಿಸಿದ ಘಟನೆ ಬಾಳೆಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಎರಡು ದಿನಗಳಿಂದ ಬಾಳೆಲೆ ಪಟ್ಟಣ ವ್ಯಾಪ್ತಿಯಲ್ಲಿ ಹುಚ್ಚು ನಾಯಿಯ ಧಾಳಿಗೆ ಸುಮಾರು 8 ಮಂದಿ ಗಾಯಗೊಂಡು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 3 ವರ್ಷದ ಮಗು ರಿಜ್ವಾನ್ ತನ್ನ ಮನೆಯ ಅಂಗದಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಮಗುವಿನ ಮೈ ಮೇಲೆ ಎರಗಿದ ಹುಚ್ಚು ನಾಯಿ ಮಗುವಿನ ಎದೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ.ಕೊಪ್ಪಲು ನಿವಾಸಿ ರಾಜು (52) ಇವರ ಮೇಲೆಯು ನಾಯಿ ಧಾಳಿ ನಡೆಸಿ ಕಿವಿಯ ಭಾಗಕ್ಕೆ ಗಾಯವಾಗಿದೆ. ಪೊನ್ನ (36) ಅಭಿಷೇಕ್ (21) ರಾಮಾಚಾರಿ (51) ಸತೀಶ್ (18) ನವೀನ್ (16) ಅಪ್ಪಣ್ಣ (65) ಇವರುಗಳ ಮೇಲೂ ನಾಯಿ ಧಾಳಿ ನಡೆಸಿದೆ.
ಗ್ರಾಮದಲ್ಲಿ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿದ್ದು ಆಗಿಂದಾಗ್ಗೆ ನಾಯಿಗಳು ಮಕ್ಕಳು ಮತ್ತು ಜಾನುವಾರುಗಳ ಮೇಲೆ ಧಾಳಿ ಮಾಡುತ್ತಲೆ ಇದೆ. ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಹೆದರುವ ಪರಿಸ್ಥಿತಿ ಇದೆ. ನಾಯಿಗಳ ಹಾವಳಿ ನಿಯಂತ್ರಿಸಲು ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.
ಸಾರ್ವಜನಿಕರಿಗೆ ಬೀತಿಯನ್ನುಂಟುಮಾಡಿದ ಹುಚ್ಚು ನಾಯಿಯನ್ನು ಸ್ಥಳೀಯ ನಿವಾಸಿಯೊಬ್ಬರು ಗುಂಡಿಟ್ಟು ಕೊಂದಿದ್ದಾರೆ. ಆದರೆ ಹುಚ್ಚು ನಾಯಿ ಕಚ್ಚಿದ ಇತರ ಬೀದಿ ನಾಯಿಗಳಿಗೂ ಹುಚ್ಚು ಹರಡಿರುವ ಭೀತಿ ಎದುರಾಗಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.