ಚೆಟ್ಟಳ್ಳಿ, ಡಿ. 11: ನಮ್ಮ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂತ್ರಸ್ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ನಮ್ಮ ಕೊಡಗು ಚಾರಿಟೇಬಲ್ ಟ್ರಸ್ಟ್‍ನ ಮಡಿಕೇರಿ ಘಟಕದ ಉದ್ಘಾಟನಾ ಕಾರ್ಯಕ್ರಮ ಮಡಿಕೇರಿಯ ಬ್ಯಾರಿ ವೆಲ್‍ಫೇರ್ ಟ್ರಸ್ಟಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಮ್ಮ ಕೊಡಗು ಚಾರಿಟೇಬಲ್ ಟ್ರಸ್ಟ್‍ನ ಸ್ಥಾಪಕ ಅಧ್ಯಕ್ಷ ಎಂ.ಆರ್. ನೌಶಾದ್, ನೆರೆ ಪ್ರವಾಹದ ವೇಳೆ ನೆರೆ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಸ್ಥಾಪನೆಗೊಂಡ ಈ ಟ್ರಸ್ಟ್, ರಾಜ್ಯ ಮಟ್ಟದಲ್ಲಿ ನೋಂದಣಿಗೊಂಡಿದೆ. ಇತ್ತೀಚೆಗೆ ಮಡಿಕೇರಿ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ಜೊತೆಗೆ ನೆರೆಸಂತ್ರಸ್ತ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ ಎಂದರು.

ಮಡಿಕೇರಿ ಘಟಕದ ಅಧ್ಯಕ್ಷರಾಗಿ ಪ್ರಜ್ವಲ್ ಕುಮಾರ್, ಉಪಾಧ್ಯಕ್ಷರಾಗಿ ನಗರಸಭಾ ಸದಸ್ಯೆ ತಜಸುಂ, ಕಾರ್ಯದರ್ಶಿಯಾಗಿ ಕೆಂಚಪ್ಪ, ಪದಾಧಿಕಾರಿಗಳಾಗಿ ಕಾಂಚನ, ಶಶಿಧರ್, ತಾಹಿರಾ, ಜಯಲಕ್ಷ್ಮಿಯವರನ್ನು ಆಯ್ಕೆ ಮಾಡಲಾಯಿತು. ಐದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಹಫೀಜ್, ಸಮಾಜಸೇವಕಿ ವಿಜಯಲಕ್ಷ್ಮಿ, ನಮ್ಮ ಕೊಡಗು ಟ್ರಸ್ಟಿನ ಮೋಕ್ಷಿತ, ನಜ್ಮಾ, ಲೋಹಿತ್, ಜಾನ್ಸನ್, ಕಿರಣ್, ಶಾಂತಪ್ರಕಾಶ್ ಭಾಗವಹಿಸಿದ್ದರು.