ಕೂಡಿಗೆ, ಡಿ. 11: ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕೂಡಿಗೆಯ ಕ್ರೀಡಾ ಶಾಲೆಯ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಂಡ್ಯದ ನಾಗಮಂಡಲ ತಾಲೂಕಿನ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಬಿ.ಜಿ.ಎಸ್. ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಶಾಲಾ 17 ವರ್ಷ ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕೂಡಿಗೆಯ ಕ್ರೀಡಾಶಾಲೆಯ ಬಿ.ಯು. ಭವ್ಯ ಚಿನ್ನದ ಪದಕ ಗಳಿಸಿದ್ದು, ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. 17 ವರ್ಷ ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬಿ.ಯು. ಭವ್ಯ 3000 ಮೀಟರ್ ಓಟ ಮತ್ತು 1500 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಕ್ರೀಡಾಪಟು ಎಂದು ಹೊರಹೊಮ್ಮಿ ವಿಶೇಷ ಬಹುಮಾನ ಗಳಿಸಿದ್ದಾರೆ. 800 ಮೀಟರ್ 1500 ಮೀಟರ್ ಓಟದಲ್ಲಿ ಶಿವ ಕುಮಾರ್ ಕ್ರಮವಾಗಿ ಎರಡು ಕಂಚಿನ ಪದಕವನ್ನು ಗಳಿಸಿದ್ದಾರೆ. ಕ್ರೀಡಾಕೂಟದಲ್ಲಿ ಒಟ್ಟು 36 ತಂಡಗಳು ಭಾಗವಹಿಸಿದ್ದು, ಸುಮಾರು 2800 ಕ್ರೀಡಾಪಟುಗಳು ಭಾಗವಹಿಸಿದ್ದರು.