ಕೂಡಿಗೆ, ನ. 22: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಗ್ರಾಮಸಭೆಯು ವಿಶ್ವ ಶೌಚಾಲಯ ದಿನಾಚರಣೆಯ ಅಂಗವಾಗಿ ಮುಳ್ಳುಸೋಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ವಹಿಸಿದ್ದರು. ಸಭೆಯಲ್ಲಿ ಈ ವ್ಯಾಪ್ತಿಗೊಳಪಡುವ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲೆಯ ಸಮಸ್ಯೆಗಳನ್ನು ಹಾಗೂ ಶಾಲೆಯಲ್ಲಿ ಆಗಬೇಕಾದ ಕೆಲಸ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಶಾಲೆಯ ಅವರಣದಲ್ಲಿ ತಡೆಗೋಡೆ ಇಲ್ಲದೆ ಇರುವದರಿಂದ ಶಾಲೆಯ ಸಮಯದ ನಂತರ ಶಾಲಾ ಆವರಣವನ್ನು ಕೆಲವರು ಹಾಳು ಮಾಡುತ್ತಿದ್ದು, ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಎಸ್. ರಾಜಶೇಖರ್ ಮಾತನಾಡಿ, ಮಕ್ಕಳ ಹಕ್ಕುಗಳ ಮತ್ತು ರಕ್ಷಣೆಯ ಕುರಿತಾಗಿ ಹಲವು ಮಹತ್ತರವಾದ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಮಕ್ಕಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವದರ ಜೊತೆಗೆ ಶಿಕ್ಷಣಕ್ಕೂ ಕೂಡ ಹೆಚ್ಚು ಒತ್ತು ನೀಡಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಮುಂದಾಗಬೇಕು ಎಂದರು.
ಕುಶಾಲನಗರ, ಗೊಂದಿಬಸವನಹಳ್ಳಿ, ಗುಮ್ಮನಕೊಲ್ಲಿ ಪ್ರಾಥಮಿಕ ಶಾಲೆಗಳಿಂದ ಗ್ರಾಮ ಸಭೆಗೆ ಆಗಮಿಸಿದ್ದ ಕೆಲವು ವಿದ್ಯಾರ್ಥಿಗಳು ತಮ್ಮ ಶಾಲೆಗಳ ಮೂಲಭೂತ ಸೌಲಭ್ಯಗಳ, ಕುಂದುಕೊರತೆ ಬಗ್ಗೆ ಮತ್ತು ಅವುಗಳನ್ನು ಆದಷ್ಟು ಶೀಘ್ರವೇ ಪರಿಹಾರ ಮಾಡಿಕೊಡಬೇಕೆಂದು ಸಭೆಯಲ್ಲಿ ಕೋರಿಕೊಂಡರು.
ಪಂಚಾಯಿತಿ ಅಧ್ಯಕ್ಷೆ ಭವ್ಯ ಮಾತನಾಡಿ, ರಸ್ತೆ ಬದಿಯಲ್ಲಿರುವ ಶಾಲೆಗಳ ಸುತ್ತಲು ಬೇಲಿ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲಾ ಶಾಲೆಗಳಿಗೆ ನೀರಿನ ಮತ್ತು ಶೌಚಾಲಯಗಳ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಸಮಸ್ಯೆಗಳನ್ನು ಪರಿಹಾರ ಮಾಡಲು ಮಾಸಿಕ ಸಭೆಯಲ್ಲಿ ತೀರ್ಮಾನಿಸಿ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಭೆಯಲ್ಲಿ ಸದಸ್ಯರಾದ ರುದ್ರಾಂಬಿಕೆ, ಸುಜಾತ, ವೇದಾವತಿ, ಕುಮಾರಸ್ವಾಮಿ, ಜುಬೇದಾ, ಸರಸ್ವತಿ, ಜಯಲಕ್ಷ್ಮಿ, ಜ್ಯೋತಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ಯಮುನಾ, ವಿದ್ಯಾರ್ಥಿಗಳು ಇದ್ದರು.