ಸಿದ್ದಾಪುರ, ನ. 22: ಜೀವ ನದಿ ಕಾವೇರಿಗೆ ಕೊಳಚೆ ನೀರು ಹರಿಬಿಡುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾವೇರಿ ನದಿ ಕಲುಷಿತಗೊಳ್ಳಲು ಸ್ಥಳೀಯ ಆಡಳಿತ ವರ್ಗದವರ ನಿರ್ಲಕ್ಷ್ಯವೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾವೇರಿ ನದಿ ನೀರು ದಿನೇ ದಿನೇ ತನ್ನ ಪಾವಿತ್ರ್ಯತೆ ಕಳೆದು ಕೊಳ್ಳುತ್ತಾ ಬಣ್ಣ ಬದಲಿಸಿ ಹರಿಯಲಾರಂಭಿಸಿದೆ. ನದಿ ನೀರಿಗೆ ಕೊಳೆತ ತ್ಯಾಜ್ಯಗಳನ್ನು ನೇರವಾಗಿ ಸುರಿಯುವದು ಒಂದೆಡೆಯಾದರೆ, ಶೌಚಗೃಹದ ನೀರನ್ನು ನದಿಗೆ ಹರಿಯ ಬಿಡುತ್ತಿರುವ ದುರಂತಕ್ಕೆ ನೆಲ್ಲಿಹುದಿಕೇರಿ ಸಾಕ್ಷಿಯಾಗಿದೆ.
ಕಳೆದ ಕೆಲವು ತಿಂಗಳುಗಳ ಹಿಂದೆ ಕೆಲವು ಸಂಘಟನೆಗಳು ಕಾವೇರಿ ನದಿಯನ್ನು ಹಾಗೂ ನದಿಯ ಸುತ್ತಲೂ ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ರಾಶಿಗಟ್ಟಲೆ ತ್ಯಾಜ್ಯ ವಸ್ತುಗಳು ನದಿಯಲ್ಲಿ ಕಂಡುಬಂದಿತ್ತು. ಇದಾದ ಬಳಿಕ ಇದೀಗ ಮತ್ತೊಮ್ಮೆ ಕಾವೇರಿ ನದಿ ಮಲಿನಗೊಳ್ಳುತ್ತಿ ರುವದು ಆತಂಕಕಾರಿ ವಿಚಾರವಾಗಿದೆ.
ಶೌಚಾಲಯದ ನೀರು : ನೆಲ್ಯಹುದಿಕೇರಿ ಗ್ರಾಮದ ಕೊಳಚೆ ನೀರು ಮತ್ತು ಕೆಲ ಮನೆಗಳ ಶೌಚದ ನೀರು ಕಾವೇರಿ ಸೇತುವೆ ಬಳಿ ದೊಡ್ಡ ಮೋರಿಯ ಮೂಲಕ ನದಿಯ ಒಡಲು ಸೇರುತ್ತಿದೆ. ಇದರಿಂದಾಗಿ ಶುದ್ಧವಾಗಿದ್ದ ಕಾವೇರಿಯು ಕಪ್ಪು ಬಣ್ಣಕ್ಕೆ ತಿರುಗಿ ಪರಿಸರವೆಲ್ಲಾ ದುರ್ನಾತ ಬೀರುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ ಸುರಿದ ಮಹಾ ಮಳೆಗೆ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು.
ಈ ಸಂದರ್ಭ ಪ್ರವಾಹದ ನೀರಿನಲ್ಲಿ ಪ್ಲಾಸ್ಟಿಕ್ ಚೀಲಗಳು, ಹಳೆಯ ಬಟ್ಟೆಗಳು ಸೇರಿದಂತೆ ಅನೇಕ ವಸ್ತುಗಳು ತೇಲಿ ಬಂದವು. ಈ ಹಿನ್ನೆಲೆಯಲ್ಲಿ ಕಾವೇರಿ ನದಿಯ ಒಡಲಲ್ಲಿ ಕಸಗಳು ಹೆಚ್ಚಾಗಿ ಕಂಡುಬಂದಿತು. ಇದರಿಂದ ಸಾಂಕ್ರಾಮಿಕ ರೋಗಗಳು ಎದುರಾಗುವ ಸಾಧ್ಯತೆ ಎದುರಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಕಾವೇರಿ ನದಿಗೆ ನೆಲ್ಲಿಹುದಿಕೇರಿ ಪಟ್ಟಣದ ಕೊಳಚೆ ನೀರು ಹರಿಯ ಬಿಡುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಪಂಚಾಯಿತಿ ಕ್ರಮ ಕೈಗೊಳ್ಳುವಂತೆ ಆಗ್ರಹ ಪಡಿಸಿದ್ದಾರೆ. ನದಿಯನ್ನು ಸಂರಕ್ಷಣೆ ಮಾಡುವ ಹಾಗೂ ಪರಿಸರವನ್ನು ಕಾಪಾಡುವ ಇಲಾಖೆಗಳು ಎಚ್ಚೆತ್ತುಕೊಂಡು ಜೀವ ನದಿ ಕಾವೇರಿಯನ್ನು ಮಲಿನ ಗೊಳಿಸದಂತೆ ಕ್ರಮ ಕೈಗೊಳ್ಳುವದು ಅನಿವಾರ್ಯವಾಗಿದೆ.