ಮಡಿಕೇರಿ, ನ. 13: ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ತಾ. 15 ರವರೆಗೆ ಆಯೋಜಿತ ಕ್ಯಾಲಿಗ್ರಫಿ ಪ್ರದರ್ಶನಕ್ಕೆ ಚಾಲನೆ ದೊರಕಿದೆ.

ಜ್ಯೋತಿ ಕ್ಯಾಲಿಗ್ರಫಿ ತರಗತಿ ವತಿಯಿಂದ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಬಳಿಯ ಭಾರತೀಯ ವಿದ್ಯಾಭವನ ಸಭಾಂಗ ಣದಲ್ಲಿ ಆಯೋಜಿತವಾಗಿರುವ ಕ್ಯಾಲಿಗ್ರಫಿ ಪ್ರದರ್ಶನದಲ್ಲಿ ಹಲವಾರು ವಿದ್ಯಾರ್ಥಿಗಳು ಸುಂದರ ಅಕ್ಷರ ನಮೂನೆಗಳನ್ನು ಪ್ರದರ್ಶಿಸಿದ್ದಾರೆ.

ಪ್ರದರ್ಶನವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಮಮ್ತಾಜ್ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಹೆಚ್.ಎಂ. ಮಮ್ತಾಜ್, ಮಕ್ಕಳ ಏಕಾಗ್ರತೆಗೆ ಕ್ಯಾಲಿಗ್ರಫಿ ನೆರವಾಗುತ್ತದೆ. ಕೊಡಗಿನಲ್ಲಿ ಇಂಥ ಪ್ರದರ್ಶನ ಆಯೋಜಿಸುವ ಮೂಲಕ ಹಲವರಿಗೆ ಸ್ಫೂರ್ತಿ ತುಂಬುವ ಕಾರ್ಯವಾಗಿದೆ ಎಂದು ಶ್ಲಾಘಿಸಿದರಲ್ಲದೇ, ಕೊಡಗಿನಲ್ಲಿ ಇಂತಹ ಪ್ರದರ್ಶನಗಳಿಗೆ ಸೂಕ್ತ ಸಭಾಭವನದ ಕೊರತೆ ಕಾಡುತ್ತಿದೆ ಎಂದೂ ವಿಷಾಧಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಲತೀಫ್ ಮಾತನಾಡಿ, ಬರವಣಿಗೆ ಗಮನಿಸಿದರೆ ಬರೆದ ವ್ಯಕ್ತಿಯ ವ್ಯಕ್ತಿತ್ವ ಏನೆಂಬದನ್ನು ಅರಿಯಲು ಸಾಧ್ಯವಿದೆ. ಮಕ್ಕಳಲ್ಲಿ ಶಿಸ್ತು ಮತ್ತು ಕಲಾವಂತಿಕೆ ತರಲು ಬರವಣಿಗೆಯ ಕಲೆಯಾದ ಕ್ಯಾಲಿಗ್ರಫಿ ಅತ್ಯುತ್ತಮ ಸಾಧನ ಎಂದೂ ಹೇಳಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರುಗಳಾದ ಬಿ.ಎಸ್. ಕುಮಾರಿ, ಎ.ಎಂ. ಸೂರಜ್, ಎ.ಎಸ್. ಹೇಮಲತಾ ಮಾತನಾಡಿ, ಕ್ಯಾಲಿಗ್ರಫಿ ಪ್ರದರ್ಶನದ ಮೂಲಕ ಮಕ್ಕಳು ಮಾತ್ರವಲ್ಲದೇ ಹಿರಿಯರ ಕೈ ಬರಹವನ್ನು ಕಲಾತ್ಮಕಗೊಳಿಸುವ ಪ್ರಯತ್ನವನ್ನು ಶ್ಲಾಘಿಸಿದರು.

ಕೇಂದ್ರದ ಮುಖ್ಯಸ್ಥೆ ನಮಿತಾ ರಾವ್ ಸ್ವಾಗತಿಸಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಎಸ್. ದೇವಯ್ಯ, ಜಿಲ್ಲಾ ಶಿಶುಕಲ್ಯಾಣ ಸಂಸ್ಥೆ ಅಧ್ಯಕ್ಷ ಕೆ. ಮೋಹನ್ ಮೊಣ್ಣಪ್ಪ ಹಾಜರಿದ್ದರು. ಕೇಂದ್ರದ 40ಕ್ಕೂ ಅಧಿಕ ಮಕ್ಕಳು ಕ್ಯಾಲಿಗ್ರಫಿ ಪ್ರದರ್ಶನದಲ್ಲಿ ಒಂದಕ್ಕಿಂತ ಒಂದು ಚಂದದ ಬರಹಗಳು ಮನಸೆಳೆಯುತ್ತಿವೆ.

ಕ್ಯಾಲಿಗ್ರಫಿ ಪ್ರದರ್ಶನ ತಾ. 14 ಮತ್ತು 15 ರಂದು ಬೆಳಿಗ್ಗೆ 11 ರಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರುತ್ತದೆ ಎಂದು ಜ್ಯೋತಿ ಕ್ಯಾಲಿಗ್ರಫಿ ಕೇಂದ್ರದ ಮುಖ್ಯಸ್ಥೆ ನಮಿತಾ ರಾವ್ ಮಾಹಿತಿ ನೀಡಿದ್ದಾರೆ.